ಬೆಂಗಳೂರು: ಅಕ್ರಮ ಸಂಬಂಧ ಆರೋಪ; ಮಹಿಳೆಯ ಕೊಲೆ
ಒಂದೇ ಕುಟುಂಬದ ಮೂವರಿಗೆ ಚಾಕು ಇರಿತ
ಬೆಂಗಳೂರು, ನ.18: ಅಕ್ರಮ ಸಂಬಂಧ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬ ಒಂದೇ ಕುಟುಂಬದ ಮೂವರಿಗೆ ಚಾಕು ಇರಿದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಇಲ್ಲಿನ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಾವಿತ್ರಮ್ಮ (47) ಮೃತಪಟ್ಟ ಮಹಿಳೆ ಎಂದು ಪೊಲೀಸರು ಗುರುತಿಸಿದ್ದು, ಈಕೆಯ ಮಗ ಭರತ್ ಹಾಗೂ ಪತಿ ಸಣ್ಣಪ್ಪಎಂಬುವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಾಕು ಇರಿದ ಆರೋಪಿ ಆನಂದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಘಟನೆ: ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಆನಂದ್ನ ಪತ್ನಿ ಮತ್ತು ಮೃತ ಸಾವಿತ್ರಮ್ಮ ಪುತ್ರ ಭರತ್ ನಡುವೆ ಅಕ್ರಮ ಸಂಬಂಧ ಇತ್ತು ಎಂದು ಹೇಳಲಾಗಿದೆ. ಇದೇ ವಿಷಯದಲ್ಲಿ ಆನಂದ್ ಮತ್ತು ಪತ್ನಿ ನಡುವೆ ನಿತ್ಯ ಜಗಳವಾಗುತ್ತಿತ್ತು. ಶನಿವಾರ ರಾತ್ರಿ ಇದೇ ವಿಚಾರ ಮುಂದಿಟ್ಟುಕೊಂಡು ತೀವ್ರ ಜಗಳ ನಡೆದಿತ್ತು ಎನ್ನಲಾಗಿದೆ. ಆದರೆ, ಆನಂದ್ ಪತ್ನಿ, ಭರತ್ಗೆ ಮೊಬೈಲ್ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಾಳೆ. ಭರತ್ ತನ್ನ ತಂದೆ ಸಣ್ಣಪ್ಪ ಹಾಗೂ ತಾಯಿ ಸಾವಿತ್ರಮ್ಮ ಅವರೊಂದಿಗೆ ಸ್ಥಳಕ್ಕೆ ಬಂದಿದ್ದಾರೆ. ಇದರಿಂದ ಕೋಪಗೊಂಡ ಆನಂದ್ ಚಾಕುವಿನಿಂದ ಮೊದಲು ಸಾವಿತ್ರಮ್ಮ ಅವರ ಎದೆಗೆ ಇರಿದಿದ್ದಾನೆ. ತಡೆಯಲು ಬಂದ ಭರತ್ ಹಾಗೂ ಸಣ್ಣಪ್ಪ ಅವರ ಕೈ, ಬೆನ್ನಿಗೆ ಇರಿದಿದ್ದಾನೆ ಎಂದು ತಿಳಿದುಬಂದಿದೆ. ತೀವ್ರ ಗಾಯಗೊಂಡ ಸಾವಿತ್ರಮ್ಮ ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದರೂ, ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡ ಭರತ್ ಮತ್ತು ಸಣ್ಣಪ್ಪ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸ್ಥಳಕ್ಕೆ ಬಂದ ಕೊತ್ತನೂರು ಠಾಣೆ ಪೊಲೀಸರು ಆರೋಪಿ ಆನಂದ್ನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ