ಬೆಂಗಳೂರು: ನಾರಾಯಣ ಹೆಲ್ತ್ ಸಿಟಿಯಲ್ಲಿ ಅಸ್ಥಿಮಜ್ಜೆ ಶಸ್ತ್ರಚಿಕಿತ್ಸೆ ಯಶಸ್ವಿ
ಬೆಂಗಳೂರು, ನ.21: ನಾರಾಯಣ ಹೆಲ್ತ್ ಸಿಟಿ ಜರ್ಮನ್ ದಾನಿಯ ಸಹಕಾರದೊಂದಿಗೆ ಕೋಲಾರ ಮೂಲದ 10ವರ್ಷದ ಬಾಲಕನಿಗೆ ಅಸ್ಥಿಮಜ್ಜೆ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಬಾಲಕನ ಅಪ್ಲೆಸ್ಟಿಕ್ ಅನೀಮಿಯಾ ಸಮಸ್ಯೆಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ನಿರಂತರವಾಗಿ ಶೋಧ ನಡೆಸಿದ ನಾರಾಯಣ ಹೆಲ್ತ್ ತಂಡ ಸೂಕ್ತ ದಾನಿಯನ್ನು ಜರ್ಮನಿ ರಿಜಿಸ್ಟ್ರಿಯಲ್ಲಿ ಪತ್ತೆ ಹಚ್ಚಲಾಯಿತು. ಈ ಚಿಕಿತ್ಸೆಯ ವೆಚ್ವಕ್ಕೆ ಇಎಸ್ಐ ಅನುದಾನ ನೀಡಿದೆ. ಇದರೊಂದಿಗೆ ಗುಂಪು ಮೂಲಗಳಿಂದಲೂ ಹಣ ಸಂಗ್ರಹ ಮಾಡಿ, ಅಸ್ಥಿಮಜ್ಜೆ ಚಿಕಿತ್ಸೆಯನ್ನು ಯಶಸ್ವಿಗೊಳಿಸಲಾಗಿದೆ.
ಭಾರತದಲ್ಲಿ ಒಂದು ಲಕ್ಷಕ್ಕೂ ಅಧಿಕ ಗಂಭೀರ ರಕ್ತ ಸಂಬಂಧಿ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಇಂತಹ ಸಮಸ್ಯೆಗಳಿಗೆ ಅಸ್ಥಿಮಜ್ಜೆ ಕಸಿ ಉತ್ತಮ ಚಿಕಿತ್ಸಾ ವಿಧಾನವಾಗಿದೆ. ನಾರಾಯಣ ಹೆಲ್ತ್ ಸಿಟಿ ಕಳೆದ 14ವರ್ಷಗಳಿಂದ ಯಶಸ್ವಿಯಾಗಿ ಅಸ್ಥಿಮಜ್ಜೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೆಲ್ತ್ ಸಿಟಿಯ ಅಧ್ಯಕ್ಷ ಡಾ.ದೇವಿಶೆಟ್ಟಿ ತಿಳಿಸಿದರು.
ಬಿಎಂಟಿ ಚಿಕಿತ್ಸೆಯನ್ನು ರಾಷ್ಟ್ರೀಯ ಆರೋಗ್ಯ ಯೋಜನೆಗಳಲ್ಲಿ ಸೇರಿಸುವ ಪ್ರಸ್ತಾವವನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲು ನಾರಾಯಣ ಹೆಲ್ತ್ ಸಿಟಿ ಮುಂದಾಗಿದೆ. ಇದರಿಂದ ಹೆಚ್ಚು ಸಂಖ್ಯೆಯ ಫಲಾನುಭವಿಗಳಿಗೆ ಸೌಲಭ್ಯ ದೊರೆಯಲಿದೆ. ಭಾರತದಲ್ಲಿ 80ಸಾವಿರದಿಂದ 1ಲಕ್ಷ ಮಕ್ಕಳು ಪ್ರತಿವರ್ಷ ಗಂಭೀರ ಪ್ರಮಾಣದ ಜನ್ಮ ಸಂಬಂಧಿ ರೋಗಗಳೊಂದಿಗೆ ಜನಿಸುತ್ತಿದ್ದಾರೆ ಎಂದು ಮುಜಂದಾರ್ ಷಾ ಕ್ಯಾನ್ಸರ್ ಕೇಂದ್ರದ ಅಸ್ಥಿಮಜ್ಜೆ ಕಸಿ ವಿಭಾಗದ ಮುಖ್ಯಸ್ಥ ಡಾ.ಸುನಿಲ್ ಭಟ್ ತಿಳಿಸಿದ್ದಾರೆ.