ಸಸ್ಯಕಾಶಿ ಲಾಲ್ಬಾಗ್ನಲ್ಲಿ ಗಾಂಧಿ ಕಥೆ ಹೇಳಲು ತೋಟಗಾರಿಕೆ ಇಲಾಖೆ ಸಿದ್ಧತೆ
ಮಹಾತ್ಮ ಗಾಂಧೀಜಿಯ 150ನೇ ಜನ್ಮ ವರ್ಷಾಚರಣೆ
ಬೆಂಗಳೂರು, ಡಿ.16: ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಪ್ರಯುಕ್ತ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಸಸ್ಯಕಾಶಿ ಲಾಲ್ಬಾಗ್ನಲ್ಲಿ ಗಾಂಧೀಜಿಯವರ ಕಥೆ ಹೇಳಲು ರಾಜ್ಯ ತೋಟಗಾರಿಕೆ ಇಲಾಖೆ ಸಿದ್ಧತೆ ನಡೆಸಿದೆ.
ಈ ಬಾರಿಯ ಗಣರಾಜ್ಯೋತ್ಸವಕ್ಕಾಗಿ ಏರ್ಪಡಿಸಲಾಗಿರುವ 209ನೇ ಫಲಪುಷ್ಪಪ್ರದರ್ಶನವನ್ನು ಗಾಂಧೀಜಿ ಅವರಿಗೇ ಸಮರ್ಪಣೆ ಮಾಡಬೇಕೆಂದು ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇನ್ನೂ ಒಂದು ಸುತ್ತಿನ ಸಭೆ ನಡೆಯಬೇಕಿದ್ದು, ಅಂತಿಮ ಯೋಜನೆ ರೂಪುಗೊಳ್ಳಲಿದೆ.
ಪ್ರದರ್ಶನದಲ್ಲಿ ಗಾಂಧಿ ಸಂದೇಶ ಸಾರುವುದಲ್ಲದೆ, ಗಾಜಿನ ಮನೆಯ ಹೊರಭಾಗದಲ್ಲಿ ಗಾಂಧಿ ಕುರಿತು ಛಾಯಾಚಿತ್ರಗಳ ಪ್ರದರ್ಶನ, ಸಿರಿಧಾನ್ಯ ಹುಲ್ಲಿನಲ್ಲಿ ಬಾಪೂಜಿ ಪ್ರತಿಮೆ ಹಾಗೂ ಸ್ವಚ್ಛ ಭಾರತವನ್ನು ಪ್ರತಿನಿಧಿಸುವ ಗಾಂಧಿ ಕನ್ನಡಕ ರೂಪಿಸುವ ಚಿಂತಿಸಲಾಗುತ್ತಿದೆ.
ಪ್ರದರ್ಶನಕ್ಕೆ ಸುಮಾರು 1.8 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಪುಣೆ, ಊಟಿ ಸೇರಿದಂತೆ ವಿವಿಧೆಡೆಯಿಂದ ಹೂಗಳನ್ನು ತರಿಸಿಕೊಳ್ಳಲಿದ್ದು, ಚೆಂಡು, ಸೇವಂತಿ, ಗುಲಾಬಿ ಹೀಗೆ, ಬಗೆಬಗೆಯ ಹೂಗಳ ಸುಮಾರು 25 ಸಾವಿರಕ್ಕೂ ಹೆಚ್ಚು ಕುಂಡಗಳು ಇಲಾಖೆಯಲ್ಲೇ ಲಭ್ಯವಿರುವುದಾಗಿ ತಿಳಿದು ಬಂದಿದೆ.
ಮೂರು ಕೋತಿ: ಗಾಜಿನಮನೆಯಲ್ಲಿ ಬಾಪು ಕುಟೀರ, ಗಾಂಧಿ ಚರಕ, ಸಬರಮತಿ ಆಶ್ರಮ, ರಾಜ್ ಘಾಟ್, ದಂಡಿ ಸತ್ಯಾಗ್ರಹ ಸೇರಿದಂತೆ ಬಾಪು ಅವರನ್ನು ನೆನಪಿಸುವ ದೃಶ್ಯಗಳು ಹೂಗಳಲ್ಲಿ ಮೈದಳೆಯಲಿವೆ. ಅಷ್ಟೇ ಅಲ್ಲದೆ, ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಮಾತನಾಡಬೇಡ ಎಂಬ ಸಂದೇಶ ಸಾರುವ ಮೂರು ಕೋತಿಗಳೂ ರೂಪು ತಾಳಲಿದ್ದು, ಫಲಪುಷ್ಪಪ್ರದರ್ಶನ ಜ.18 ರಿಂದ 27ರ ತನಕ ನಡೆಯಲಿದೆ.
ಪ್ರವೇಶ ಶುಲ್ಕ
* ವಿದ್ಯಾರ್ಥಿಗಳಿಗೆ ಮತ್ತು ಶಾಲಾ ಬಸ್ಗಳಿಗೆ ಪ್ರವೇಶ ಉಚಿತ
* ದೊಡ್ಡವರಿಗೆ 70 ರೂ.
* ಮಕ್ಕಳಿಗೆ 20 ರೂ.