ಬಹಿರಂಗ ಚರ್ಚೆಗೆ ಬರಲು ಪ್ರೊ.ಭಗವಾನ್ಗೆ ಪೇಜಾವರ ಶ್ರೀ ಆಹ್ವಾನ
"ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದರೆ ಭಗವಾನರಿಗೆ ಕಷ್ಟವಾಗುತ್ತದೆ"
ಬೆಂಗಳೂರು, ಡಿ 29: ಶ್ರೀರಾಮಚಂದ್ರನ ಕುರಿತ ಅವಹೇಳನಕಾರಿಯಾಗಿ ಬರೆದಿರುವ ವಿಚಾರವಾದಿ ಭಗವಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪೇಜಾವರ ಶ್ರೀ, ಅವರನ್ನು ಬಹಿರಂಗ ಚರ್ಚೆಗೆ ಬರುವಂತೆ ಆಹ್ವಾನ ನೀಡಿದ್ದಾರೆ.
ನಗರದಲ್ಲಿಂದು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬಂದ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಭಗವಾನ್ಗೆ ಈಗಾಗಲೇ ಎರಡು ಬಾರಿ ನಾನು ಉತ್ತರ ನೀಡಿದ್ದೇನೆ. ಈಗಲೂ ನನ್ನೊಂದಿಗೆ ಚರ್ಚೆಗೆ ಬರಲಿ. ರಾಮ ಶೂದ್ರ ವಿರೋಧಿಯಲ್ಲ. ರಾಮ ನಿರಪರಾಧಿ. ವಾದಗಳೆಲ್ಲ ಶುದ್ಧ ಸುಳ್ಳು ಎಂದು ತಿರುಗೇಟು ನೀಡಿದ್ದಾರೆ.
ಹಿಂದೆ ನಿಂತು ಮಾತನಾಡುವ ಬದಲು ರಾಮನ ವಿಚಾರದಲ್ಲಿ ಅವರು ಮಾಡಿರುವ ಎಲ್ಲ ಆರೋಪಗಳಿಗೆ ಉತ್ತರ ನೀಡಲು ಸಿದ್ಧನಿದ್ದೇನೆ. ಭಗವಾನ್ಗೆ ಭಗವದ್ಗೀತೆ ಬಗ್ಗೆ ಅರಿವಿಲ್ಲ. ಮಹಾತ್ಮ ಗಾಂಧೀಜಿಯವರ ಬಗ್ಗೆಯೂ ಕೆಟ್ಟದಾಗಿ ಬಿಂಬಿಸಿದ್ದಾರೆ. ಅವರಿಗೆ ಒಳ್ಳೆಯದು ಏನೂ ಕಾಣುವುದಿಲ್ಲ ಎಂದು ಕಿಡಿಕಾರಿದ್ದಾರೆ. ವಿವಾದಾತ್ಮಕ ಹೇಳಿಕೆ ನೀಡಿರುವ ಭಗವಾನ್ಗೆ ರಕ್ಷಣೆ ಈಗ ಅನಿವಾರ್ಯವಾಗಿದೆ. ಪ್ರಜೆಗಳ ರಕ್ಷಣೆ ಮಾಡಬೇಕಲ್ಲ. ಅವರು ಇದೇ ರೀತಿ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದರೆ ಅವರಿಗೆ ಕಷ್ಟವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.