ಜ.8, 9ರ ಮುಷ್ಕರಕ್ಕೆ ಬೆಂಬಲ ನೀಡುವಂತೆ ಸಿಐಟಿಯು ಮನವಿ
ಬೆಂಗಳೂರು, ಜ.5: ಕೇಂದ್ರ ಸರಕಾರದ ಕಾರ್ಮಿಕ ನೀತಿಯ ವಿರುದ್ಧ ದೇಶದ ವಿವಿಧ ರೈತ ಹಾಗೂ ಕಾರ್ಮಿಕ ಸಂಘಟನೆಗಳು ಜ.8 ಹಾಗೂ 9ರಂದು ಕರೆ ನೀಡಿರುವ ಮುಷ್ಕರಕ್ಕೆ ಸಾರ್ವಜನಿಕರು ಬೆಂಬಲ ನೀಡಬೇಕು ಎಂದು ಕೇಂದ್ರ ಕಾರ್ಮಿಕ ಸಂಘನೆಗಳ ಜಂಟಿ ಸಮಿತಿ ಮನವಿ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು ಸಮಿತಿ ಮುಖ್ಯಸ್ಥೆ ವರಲಕ್ಷ್ಮಿ, ಜ.8ರಂದು ಮಧ್ಯಾಹ್ನ 12ಗಂಟೆಗೆ ಪುರಭವನದಿಂದ ಸ್ವಾತಂತ್ರ ಉದ್ಯಾನದವರೆಗೆ ಬೃಹತ್ ಮೆರವಣಿಗೆ ಹಾಗೂ ಜ.9ರಂದು ಬೆಳಗ್ಗೆ 10.30ರಿಂದ ಪುರಭವನದಿಂದ ರಾಜಭವನದ ವರೆಗೆ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಕಾರ್ಪೊರೇಟ್ ಬಂಡವಾಳಶಾಹಿಗಳ ಪರ ಕಾರ್ಮಿಕ ಕಾನೂನು ತಿದ್ದುಪಡಿ ಮಾಡಲು ಮುಂದಾಗಿರುವ ಕೇಂದ್ರ ಸರಕಾರದ ಕ್ರಮ ವಿರೋಧಿಸಿ ಹಾಗೂ 43ನೇ ಭಾರತೀಯ ಕಾರ್ಮಿಕ ಸಮ್ಮೇಳನ ಶಿಫಾರಸ್ಸಿನಂತೆ ವಿವಿಧ ಯೋಜನೆಗಳಡಿ ನೇಮಕಗೊಳ್ಳುವ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸಿ ಖಾಯಂ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಹೇಳಿದರು.
ಕೆಎಸ್ಆರ್ಟಿಸಿ, ಬಿಎಂಟಿಎಸ್, ಆಟೋ ಸಂಘಟನೆಗಳು, ಸಾರ್ವಜನಿಕ ಕೈಗಾರಿಕೆಗಳ ಕಾರ್ಮಿಕರ ಸಂಘಟನೆಗಳು, ಅಂಗನವಾಡಿ-ಬಿಸಿಯೂಟ ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ನೌಕರರು, ಕಟ್ಟಡ, ಗಾರ್ಮೆಂಟ್ಸ್, ಫುಟ್ಪಾತ್ ವ್ಯಾಪಾರಿಗಳು ಸೇರಿದಂತೆ ಎಲ್ಲರೂ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು, ಎರಡು ದಿನಗಳ ಕಾಲ ಉತ್ಪಾದನೆ ಹಾಗೂ ಸೇವೆ ಸ್ಥಗಿತಗೊಳಿಸುತ್ತಿದ್ದಾರೆ ಎಂದರು.