ಎಂತಹ ಕಷ್ಟದ ಸ್ಥಿತಿ ಎದುರಾದರೂ ಎದೆಗುಂದದೆ ಮುನ್ನಡೆಯಿರಿ: ಕ್ರಿಕೆಟಿಗ ರಾಜೂ ಭಟ್ಕಳ್
ಬೆಂಗಳೂರು, ಜ 12: ಕನಸು ಮತ್ತು ಗುರಿ ದೊಡ್ಡದಾಗಿರಬೇಕು. ಎಂತಹ ಕಷ್ಟದ ಸ್ಥಿತಿ ಎದುರಾದರೂ ಎದೆಗುಂದದೆ ಮುನ್ನಡೆಯಬೇಕು. ಸೋಲು ಮತ್ತು ವೈಫಲ್ಯವನ್ನು ಎದುರಿಸುವ ಮನೋಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕ್ರಿಕೆಟ್ ಆಟಗಾರ ರಾಜೂ ಭಟ್ಕಳ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯವರು ಆಯೋಜಿಸಿದ್ದ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ನೂತನ ಬ್ಯಾಚ್ಗಳ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ತಮ್ಮ ಗುರಿಯನ್ನು ತಾವೇ ನಿರ್ಧರಿಸಿಕೊಳ್ಳಬೇಕು. ಛಲ ಬಿಡದೆ ಗುರಿ ಮುಟ್ಟುವ ತನಕ ಮುನ್ನಡೆಯಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ನಿರ್ದೇಶಕ ವೆಂಕಟೇಶ ಶೇಷಾದ್ರಿ ಮಾತನಾಡಿ, ಮಹಿಳಾ ಮತ್ತು ಯುವಕರ ಸಬಲೀಕರಣದಲ್ಲಿ ಕೆನರಾ ಬ್ಯಾಂಕ್ನ ಪಾತ್ರ ಅತ್ಯಂತ ಮಹತ್ತರವಾದದ್ದು. ಕೆನರಾ ಬ್ಯಾಂಕ್ ತನ್ನ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಗಳ ಮುಖಾಂತರ ಮೂರು ಲಕ್ಷಕ್ಕೂ ಹೆಚ್ಚು ಯುವಕ-ಯುವತಿಯರಿಗೆ ತರಬೇತಿ ನೀಡಿ, ಸ್ವಯಂ-ಉದ್ಯೋಗ ಸ್ಥಾಪಿಸಲು ನೆರವಾಗಿದೆ ಎಂದು ಮಾಹಿತಿ ನೀಡಿದರು. ಸಮಾರಂಭದಲ್ಲಿ ಉಪನ್ಯಾಸಕ ವೆಂಕಟೇಶ ಬಾಬು ಮತ್ತು ಅನುಶ್ರೀ ಉಪಸ್ಥಿತರಿದ್ದರು.