ಪ್ರಧಾನಿ ಮೋದಿಗೆ ಶೋಭೆ ತರುವುದಿಲ್ಲ: 'ಕುಮಾರಸ್ವಾಮಿ ಕ್ಲರ್ಕ್' ಹೇಳಿಕೆಗೆ ಬಸವರಾಜ್ ಹೊರಟ್ಟಿ ಪ್ರತಿಕ್ರಿಯೆ
ಹುಬ್ಬಳ್ಳಿ, ಜ. 13: ಪ್ರಧಾನಿ ಮೋದಿಯವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ‘ಕ್ಲರ್ಕ್’ ಎಂದು ಹೇಳಿದ್ದು ಸರಿಯಲ್ಲ. ಉನ್ನತ ಸ್ಥಾನದಲ್ಲಿರುವವರು ಈ ರೀತಿಯ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ವಿರುದ್ಧ ದೂರು ನೀಡಿದ್ದರು. ಆಗ ನಾನೇ ಹಲವು ಬಾರಿ ಬಿಎಸ್ವೈ ಮನೆಗೆ ಹೋಗಿ ಸಮಸ್ಯೆ ಬಗೆಹರಿಸಿದ್ದೇನೆ ಎಂದು ತಿರುಗೇಟು ನೀಡಿದರು.
ಆರೋಪ ಸಾಬೀತಾಗದೆ ಸಚಿವ ಪುಟ್ಟರಂಗಶೆಟ್ಟಿ ರಾಜೀನಾಮೆ ಸರಿಯಲ್ಲ. ಈ ಹಿಂದೆ ಸಂತೋಷ್ ಲಾಡ್, ಕೆ.ಜೆ.ಜಾರ್ಜ್ ಮೇಲೆ ಆರೋಪ ಬಂದಾಗ ರಾಜೀನಾಮೆ ನೀಡಿದ್ದರು. ಹೀಗಾಗಿ ತಾನೂ ಸಚಿವ ಪುಟ್ಟರಂಗಶೆಟ್ಟಿ ರಾಜೀನಾಮೆ ನೀಡಲು ಆಗ್ರಹಿಸಿದ್ದೆ ಎಂದು ಹೊರಟ್ಟಿ ಸ್ಪಷ್ಟಣೆ ನೀಡಿದರು.
ಶಾಮನೂರು ಶಿವಶಂಕರಪ್ಪ ಮತ್ತು ಗೃಹ ಸಚಿವ ಎಂ.ಬಿ.ಪಾಟೀಲ್ ನಡುವಿನ ವಾಕ್ಸಮರ ಒಳ್ಳೆಯದಲ್ಲ ಎಂದು ಆಕ್ಷೇಪಿಸಿದ ಹೊರಟ್ಟಿ, ಶಾಮನೂರು ಶಿವಶಂಕರಪ್ಪ ಹಿರಿಯ ಮುಖಂಡರು. ಅವರ ಬಗ್ಗೆ ಪಾಟೀಲ್ ಹಗುರವಾಗಿ ಮಾತನಾಡುವುದು ಸಲ್ಲ ಎಂದರು.