ಕೆಎಸ್ಸಾರ್ಟಿಸಿಯಲ್ಲಿ ನೇಮಕಾತಿ ಆದೇಶ ನಕಲಿ ದಂಧೆ: ದಕ್ಷಿಣ ಕನ್ನಡ ಜಿಲ್ಲೆಯ ಮೂವರ ವಿರುದ್ಧ ಎಫ್ಐಆರ್
ಬೆಂಗಳೂರು, ಜ.15: ನಕಲಿ ನೇಮಕಾತಿ ಆದೇಶ ಪ್ರತಿ ನೀಡಿ ಕೆಎಸ್ಸಾರ್ಟಿಸಿಯಲ್ಲಿ ಸಹಾಯಕ ಆಡಳಿತಾಧಿಕಾರಿ ಹುದ್ದೆಗೆ ಪ್ರಯತ್ನಿಸಿದ್ದ ಆರೋಪದಡಿ ಇಲ್ಲಿನ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಮೂಲದ ಅಶ್ವಿನ್, ಪುನೀತ್, ಸೈರಿಯಲ್ ಎಂಬವರ ವಿರುದ್ಧ ಮೊಕದ್ದಮೆ ದಾಖಲಾಗಿದೆ ಎಂದು ತಿಳಿದುಬಂದಿದೆ.
ಕೆಎಸ್ಸಾರ್ಟಿಸಿ ಸಹಾಯಕ ಆಡಳಿತಾಧಿಕಾರಿ ಹುದ್ದೆಗೆ ನೇಮಕ ಸಂಬಂಧ ಅಶ್ವಿನ್ ಅಸಲಿಯಂತೆ ಕಾಣುವ ಆದೇಶ ಪ್ರತಿಯನ್ನು ಇದೇ ತಿಂಗಳು 10 ರಂದು ಭದ್ರತಾಧಿಕಾರಿಗಳ ಮುಂದೆ ಹಾಜರುಪಡಿಸಿದ್ದ. ಆದೇಶ ಪತ್ರದಲ್ಲಿ ಇಲಾಖೆಯ ಅಧಿಕೃತ ಲಾಂಛನ ಹಾಗೂ ವ್ಯವಸ್ಥಾಪಕ ನಿರ್ದೇಶಕರ ಸಹಿ ಇರಲಿಲ್ಲ ಎನ್ನಲಾಗಿದೆ.
ಆದ್ದರಿಂದ ಆರೋಪಿಯ ಸಂಚು ಬಯಲಾಗಿದೆ. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಬಳಿ ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಸಹಿಯುಳ್ಳ ಎರಡು ನಕಲಿ ಆದೇಶ ಪ್ರತಿಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ನಕಲಿ ನೇಮಕಾತಿ ಆದೇಶ ಪತ್ರವನ್ನು ಪುನೀರ್ ಎಂಬಾತ ಮಾಡಿಕೊಟ್ಟಿದ್ದು, ಆರೋಪಿ ಸೈರಿಯಲ್ 2 ಲಕ್ಷ ರೂ. ನೀಡಿ ನಕಲಿ ಪತ್ರವನ್ನು ಅಶ್ವಿನ್ಗೆ ತಂದು ಕೊಟ್ಟಿದ್ದ. ಈ ಸಂಬಂಧ ಮೂವರು ಆರೋಪಿಗಳ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.