ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷರ ಅವಿರೋಧ ಆಯ್ಕೆ
ಬೆಂಗಳೂರು, ಜ.17: ಬಿಜೆಪಿ ಸದಸ್ಯರ ಬಹಿಷ್ಕಾರದ ನಡುವೆಯೂ ಬಿಬಿಎಂಪಿಯ ಎಲ್ಲ 12 ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿನ ಮೇಯರ್ ಗಂಗಾಂಬಿಕೆ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಪಾಲಿಕೆ ಎಲ್ಲ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ ಎಂದು ಮೇಯರ್ ಘೋಷಿಸಿದರು.
ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಮೇಯರ್ ಕೆಎಂಸಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಚುನಾವಣೆಯನ್ನು ಬಹಿಷ್ಕರಿಸಿ ಹೊರನಡೆದರು. ಇದರ ನಡುವೆಯೂ ಜೆಡಿಎಸ್, ಕಾಂಗ್ರೆಸ್ ಹಾಗೂ ಪಕ್ಷೇತರರ ನೆರವಿನೊಂದಿಗೆ ಎಲ್ಲ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.
ಈ ಹಿಂದೆ ಎರಡು ಬಾರಿ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ನಡೆದಿತ್ತಾದರೂ ಗೊಂದಲದ ವಾತಾವರಣ ನಿರ್ಮಾಣವಾದ್ದರಿಂದ ಚುನಾವಣೆಯನ್ನು ಮುಂದೂಡಲಾಗಿತ್ತು. ಇಂದೂ ಅದೇ ರೀತಿಯ ಸ್ಥಿತಿ ಏರ್ಪಡಬಹುದು ಎಂಬ ಹಿನ್ನೆಲೆಯಲ್ಲಿ ಮೇಯರ್ ತಮ್ಮ ಕಚೇರಿಯಲ್ಲಿಯೇ ಚುನಾವಣೆ ನಡೆಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿಸಿದರು.
ಯಾರಿಗೆ ಯಾವ ಸಮಿತಿ:
*ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ- ಹೇಮಲತಾ ಗೋಪಾಲಯ್ಯ
*ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ- ಎ.ಮುಜಾಯಿದ್ ಪಾಷಾ
*ನಗರ ಯೋಜನಾ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ- ಎಸ್.ಜಿ.ನಾಗರಾಜ್
*ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ- ಲಾವಣ್ಯ ಗಣೇಶ್ ರೆಡ್ಡಿ
*ವಾರ್ಡ್ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ- ಉಮೇಸಲ್ಮಾ
*ಲೆಕ್ಕಪತ್ರ ಸ್ಥಾಯಿ ಸಮಿತಿ- ಎಂ.ವೇಲು ನಾಯಕರ್
*ಶಿಕ್ಷಣ ಸ್ಥಾಯಿ ಸಮಿತಿ- ಇಮ್ರಾನ್ ಪಾಷ
*ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ- ಪಿ.ಸೌಮ್ಯ
*ಅಪೀಲು ಸ್ಥಾಯಿ ಸಮಿತಿ- ಸುಜಾತ ರಮೇಶ್
*ತೋಟಗಾರಿಕೆ ಸ್ಥಾಯಿ ಸಮಿತಿ-ಬಿ.ಎನ್.ಐಶ್ವರ್ಯ
*ಮಾರುಕಟ್ಟೆ ಸ್ಥಾಯಿ ಸಮಿತಿ- ಫರೀದಾ ಇಸ್ತಿಯಾರ್
*ಸಿಬ್ಬಂದಿ ಮತ್ತು ಆಡಳಿತ ಸುಧಾರಣ ಸ್ಥಾಯಿ ಸಮಿತಿ- ಎಸ್.ಆನಂದ್ ಕುಮಾರ್