ಸರಗಳ್ಳತನ ಆರೋಪಿ ಬಂಧನ: ಮೂರು ಚಿನ್ನದ ಸರ ಜಪ್ತಿ
ಬೆಂಗಳೂರು, ಜ.23: ಸರಗಳ್ಳತನ ಆರೋಪ ಪ್ರಕರಣ ಸಂಬಂಧ ವ್ಯಕ್ತಿಯೋರ್ವನನ್ನು ಬಂಧಿಸಿರುವ ಸುಬ್ರಮಣ್ಯನಗರ ಠಾಣಾ ಪೊಲೀಸರು, ಮೂರು ಚಿನ್ನದ ಸರ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜಾಜಿನಗರದ ರವಿ(23) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಜಿ.ಉಮಾಪತಿ ಎಂಬುವರು ಇಲ್ಲಿನ ಮಾರುತಿ ಬಡಾವಣೆಯಲ್ಲಿರುವ ತಮ್ಮ ಅಂಗಡಿಯ ಮುಂದೆ ಕಸ ಸ್ವಚ್ಛ ಮಾಡುವಾಗ ದುಷ್ಕರ್ಮಿಯೋರ್ವ ಮಾರಕಾಸ್ತ್ರಗಳಿಂದ ಬೆದರಿಸಿ ಅವರ ಕೊರಳಿನಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದ. ಈ ಸಂಬಂಧ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು, ಆರೋಪಿ ರವಿ ಅನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಈತನಿಂದ 1.80 ಲಕ್ಷ ವೌಲ್ಯದ 59 ಗ್ರಾಂ ತೂಕದ 3 ಚಿನ್ನದ ಸರಗಳನ್ನು ಜಪ್ತಿ ಮಾಡಿದ್ದಾರೆ.
ಆರೋಪಿಯು ಈ ಹಿಂದೆ ಶ್ರೀರಾಮಪುರ ಪೊಲೀಸ್ ಠಾಣೆ ಕನ್ನಾ ಕಳವು ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಒಂದು ವರ್ಷದ ಹಿಂದೆ ಬಿಡುಗಡೆಯಾಗಿದ್ದ ಎನ್ನುವ ಮಾಹಿತಿ ಬೆಳಕಿಗೆ ಬಂದಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ.