ಗಾಂಧಿಯನ್ನು ಕೊಂದದ್ದು ದೇಶದ ಮೊದಲ ಭಯೋತ್ಪಾದನಾ ಕೃತ್ಯ: ಎಸ್ಡಿಪಿಐ
ಬೆಂಗಳೂರು, ಜ.30: ಸರ್ವಧರ್ಮ ಸಮಭಾವ, ಅಹಿಂಸಾವಾದ, ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತ ಸಿದ್ಧಾಂತದ ಬದ್ಧತೆ ಮೇಲೆ ದೇಶ ಕಟ್ಟುವ ಕನಸನ್ನು ಕಂಡಿದ್ದ ಮಹಾತ್ಮಾ ಗಾಂಧೀಜಿಯವರನ್ನು ಸಂಘಪರಿವಾರದ ಕೋಮುವಾದಿ ನಾಥೂರಾಮ್ ಗೋಡ್ಸೆ ಗುಂಡಿಕ್ಕಿ ಕೊಂದ. ಇದು ದೇಶದ ಪ್ರಥಮ ಭಯೋತ್ಪಾದನಾ ಕೃತ್ಯ ಎಂದು ಎಸ್ಡಿಪಿಐ ಪಕ್ಷದ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ತಿಳಿಸಿದ್ದಾರೆ.
ಮಹಾತ್ಮ ಗಾಂಧೀಜಿಯವರನ್ನು 1948, ಜನವರಿ 30ರಂದು ಗುಂಡಿಕ್ಕಿ ಹತ್ಯೆಗೈಯ್ಯಲಾಯಿತು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಮುಂಚೂಣಿಯಲ್ಲಿದ್ದರು. ಅವರ ಈ ಬಲಿದಾನದಿಂದ ಗಾಂಧೀಜಿಯ ಸಿದ್ಧಾಂತಕ್ಕೆ ಯಾವುದೇ ತೊಡಕಾಗಬಾರದು. ಕೋಮುವಾದಿ ಶಕ್ತಿಗಳ ವಿಭಜನವಾದಿ, ಮಾನವ ವಿರೋಧಿ ಮನಸ್ಥಿತಿ ಸೋಲಬೇಕು. ಗಾಂಧೀಜಿಯ ಬಲಿದಾನ ವ್ಯರ್ಥವಾಗಬಾರದು. ದೇಶದ ಎಲ್ಲ ನಾಗರಿಕರು ಮತ್ತು ಹೊಸ ತಲೆಮಾರು ಕೋಮುಶಕ್ತಿಗಳ ವಿರುದ್ಧ ಧ್ವನಿ ಎತ್ತಲು ಕೈಜೋಡಿಸಬೇಕು. ಈಗ ಮೆರೆಯುತ್ತಿರುವ ಗೋಡ್ಸೆವಾದಿಗಳ ಎಲ್ಲ ಕುತಂತ್ರಗಳನ್ನು ಸೋಲಿಸಬೇಕು. ಜನವರಿ 30 ಗಾಂಧಿ ಬಲಿದಾನ ದಿನವನ್ನು ದೇಶದ ಜನರು ಎಂದೆಂದಿಗೂ ಮರೆಯಬಾರದು ಎಂದು ಎಸ್ಡಿಪಿಐ ಪ್ರಕಟನೆಯಲ್ಲಿ ತಿಳಿಸಿದ್ದಾರೆ.