ಸದನದಲ್ಲಿ ಸಿಡಿ ಪ್ರದರ್ಶಿಸಿದ ಶಾಸಕ ಎಂ.ಪಿ.ರೇಣುಕಾಚಾರ್ಯ
ಬೆಂಗಳೂರು, ಫೆ.11: ವಿಧಾನಸಭೆಯಲ್ಲಿ ಆಪರೇಷನ್ ಕಮಲದ ಆಡಿಯೋ ತುಣುಕು ಕುರಿತು ಉಭಯ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯುತ್ತಿರುವ ಸಂದರ್ಭದಲ್ಲೆ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಿಡಿಯೊಂದನ್ನು ಪ್ರದರ್ಶಿಸಿದರು.
ಸೋಮವಾರ ಭೋಜನ ವಿರಾಮದ ಬಳಿಕ ವಿಧಾನಸಭೆ ಕಲಾಪ ಪ್ರಾರಂಭವಾದಾಗ ಆಡಿಯೋ ತುಣುಕು ಕುರಿತು ಬಿಜೆಪಿ ಸದಸ್ಯರಾದ ವಿಶ್ವೇಶರ ಹೆಗಡೆ ಕಾಗೇರಿ, ಬಸವರಾಜ ಬೊಮ್ಮಾಯಿ, ಜೆ.ಮಾಧುಸ್ವಾಮಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ರೇಣುಕಾಚಾರ್ಯ, ಆಡಿಯೋ ತುಣುಕು ಕುರಿತು ತನಿಖೆ ನಡೆಯುವುದಾದರೆ, ಈ ಸಿಡಿಯ ಬಗ್ಗೆಯೂ ತನಿಖೆಯಾಗಲಿ ಎಂದು ಒತ್ತಾಯಿಸಿದರು.
ಈ ಸಿಡಿಯಲ್ಲಿ ನಲವತ್ತು ಕೋಟಿ ರೂ.ಲಂಚದ ಕಥೆಯಿದೆ. ಇದರ ಬಗ್ಗೆಯೂ ತನಿಖೆಯಾಗಬೇಕು ಎಂದು ರೇಣುಕಾಚಾರ್ಯ ಆಗ್ರಹಿಸಿದರು. ಈ ಸಂದರ್ಭದಲ್ಲಿ ಎದ್ದು ನಿಂತ ಸಚಿವರಾದ ಯು.ಟಿ.ಖಾದರ್ ಹಾಗೂ ಡಿ.ಕೆ.ಶಿವಕುಮಾರ್, ಅದನ್ನು ಕೈಯಲ್ಲಿ ಯಾಕೆ ಹಿಡಿದುಕೊಂಡಿದ್ದೀರಾ? ಲಿಖಿತ ದೂರಿನ ಸಮೇತ ಸ್ಪೀಕರ್ಗೆ ಕೊಡಿ, ನಮ್ಮದೇನು ಅಭ್ಯಂತರವಿಲ್ಲ ಎಂದರು.
ಆಗ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ, ಸಿಡಿಯನ್ನು ಸ್ಪೀಕರ್ಗೆ ನೀಡುವಂತೆ ಸಂಜ್ಞೆ ಮೂಲಕ ಸೂಚಿಸಿದರು. ಅದರಂತೆ, ರೇಣುಕಾಚಾರ್ಯ ಸಿಡಿಯನ್ನು ಸ್ಪೀಕರ್ಗೆ ಹಸ್ತಾಂತರಿಸಿದರು.
ವಿಧಾನಸಭೆ ಕಲಾಪ ನಾಳೆಗೆ ಮುಂದೂಡಿದ ಬಳಿಕ ಸದನದಿಂದ ಹೊರ ಬಂದ ರೇಣುಕಾಚಾರ್ಯ, ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ಸಿಡಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವ್ಯಕ್ತಿಯೊಬ್ಬರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲು ಈ ಹಿಂದೆ ಕೋಟ್ಯಂತರ ರೂ.ಗಳನ್ನು ಕೇಳಿದ್ದರು. ಅದರ ಸಾಕ್ಷಿ ಈ ಸಿಡಿಯಲ್ಲಿದೆ ಎಂದರು.