ಬಿಜೆಪಿ ಪರಿಸ್ಥಿತಿ ಕಿರಾಣಿ ಅಂಗಡಿಯಲ್ಲಿ ಕುಳಿತ ಹೆಗ್ಗಣದಂತಾಗಿದೆ: ಸಿಎಂ ಇಬ್ರಾಹೀಂ
ಶಾಸಕರ ಖರೀದಿ ಆಡಿಯೋ ವಿವಾದ
ಬೆಂಗಳೂರು, ಫೆ.11: ಶಾಸಕರ ಖರೀದಿ ಆಡಿಯೋ ವಿವಾದದಿಂದಾಗಿ ರಾಜಕಾರಣಿಗಳಿಗೆ ಮೂರು ಕಾಸಿನ ಮರ್ಯಾದೆ ಇಲ್ಲದಂತಾಗಿದೆ. ಹೀಗಾಗಿ, ಈ ಆಡಿಯೋ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಿ ಸತ್ಯಾಸತ್ಯತೆಯನ್ನು ನಾಡಿನ ಜನತೆಗೆ ತಿಳಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹೀಂ ಒತ್ತಾಯಿಸಿದ್ದಾರೆ.
ಸೋಮವಾರ ವಿಧಾನ ಪರಿಷತ್ ನಲ್ಲಿ ಶಾಸಕರ ಖರೀದಿ ಆಡಿಯೋ ಬಗ್ಗೆ ಚರ್ಚೆಯಾಗಬೇಕೆಂದು ಆಡಳಿತ ಪಕ್ಷದ ಸದಸ್ಯರು ಪಟ್ಟು ಹಿಡಿದ ಬೆನ್ನಲ್ಲೇ ಮಧ್ಯಪ್ರವೇಶಿಸಿ ಮಾತನಾಡಿದ ಸಿಎಂ ಇಬ್ರಾಹೀಂ ಅವರು, ಶಾಸಕರ ಖರೀದಿ ಆಡಿಯೋದಿಂದಾಗಿ ವಿರೋಧ ಪಕ್ಷದಲ್ಲಿ ಕುಳಿತಿರುವ ಬಿಜೆಪಿಯವರ ಪರಿಸ್ಥಿತಿ ಕಿರಾಣಿ ಅಂಗಡಿಯ ಗುದ್ದುಗಳಲ್ಲಿ ಕುಳಿತ ಹೆಗ್ಗಣದಂತಾಗಿದ್ದು, ಅವರಿಗೆ ಹೊರಗೆ ಹೋಗಲು ಆಗುತ್ತಿಲ್ಲ, ಒಳ ಹೋಗಲೂ ಆಗುತ್ತಿಲ್ಲ ಎಂದು ನುಡಿದರು.
ಸಭಾಪತಿಗಳು ಖುದ್ದು ತಾವೆ ಸುಮೊಟೊ ದಾಖಲಿಸಿಕೊಂಡು, ಈ ಆಡಿಯೋ ಬಗ್ಗೆ ನ್ಯಾಯಾಂಗ ತನಿಖೆಗೆ ನೀಡಬೇಕೆಂದು ಒತ್ತಾಯಿಸಿದರು.
Next Story