'ಸಿಆರ್ಪಿಎಫ್ ನಿಧಿಗೆ ಐಪಿಎಸ್ ಅಧಿಕಾರಿಗಳ ಒಂದು ದಿನದ ಸಂಬಳ'
ಬೆಂಗಳೂರು, ಫೆ.18: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಹುತಾತ್ಮರಾದ ಸಿಆರ್ಪಿಎಫ್ ಯೋಧರ ಕುಟುಂಬಗಳಿಗೆ ನೆರವು ನೀಡುವ ಉದ್ದೇಶದಿಂದ ಐಪಿಎಸ್(ಕರ್ನಾಟಕ) ಸಂಘದ ಸದಸ್ಯರು ತಮ್ಮ ಒಂದು ದಿನದ ಸಂಬಳವನ್ನು ಡಿಜಿಪಿ-ಸಿಆರ್ಪಿಎಫ್ ನಿಧಿಗೆ ಅರ್ಪಿಸುತ್ತಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಐಪಿಎಸ್(ಕರ್ನಾಟಕ) ಸಂಘದ ಕಾರ್ಯದರ್ಶಿ ಸೌಮೇಂದು ಮುಖರ್ಜಿ, ನಮ್ಮ ಸಿಆರ್ಪಿಎಫ್ ಸಹೊದ್ಯೋಗಿಗಳ ಅಗಲಿಕೆಗೆ ನಮ್ಮ ಐಪಿಎಸ್(ಕರ್ನಾಟಕ) ಸಂಘದ ಸದಸ್ಯರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವುದರ ಜೊತೆಗೆ, ಹುತಾತ್ಮರ ಕುಟುಂಬ ಸದಸ್ಯರಿಗೆ ನಮ್ಮ ಸಾಂತ್ವನವಿದೆ ಎಂದು ತಿಳಿಸಿದ್ದಾರೆ. ಭಯೋತ್ಪಾದಕರ ಈ ಹೇಯ ಕೃತ್ಯವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಸಿಆರ್ಪಿಎಫ್ ಹಾಗೂ ಇತರ ಪೊಲೀಸ್ ಪಡೆಗಳ ಜೊತೆ ನಾವು ಬಲವಾಗಿ ನಿಂತಿದ್ದೇವೆ ಎಂದು ಅವರು ಹೇಳಿದ್ದಾರೆ.
ಹುತಾತ್ಮ ಯೋಧರ ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸಲು ಐಪಿಎಸ್(ಕರ್ನಾಟಕ) ಸಂಘದ ಸದಸ್ಯರು ತಮ್ಮ ಒಂದು ದಿನದ ಸಂಬಳವನ್ನು ಡಿಜಿಪಿ-ಸಿಆರ್ಪಿಎಫ್ ನಿಧಿಗೆ ಅರ್ಪಿಸುತ್ತಿದ್ದಾರೆ ಎಂದು ಸೌಮೇಂದು ಮುಖರ್ಜಿ ತಿಳಿಸಿದ್ದಾರೆ.
ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ನಮ್ಮ ವೀರ ಯೋಧರಿಗೆ ಕರ್ನಾಟಕ ಐಪಿಎಸ್ ಸಂಘದ ಪದಾಧಿಕಾರಿಗಳು ಒಂದು ದಿನದ ಸಂಬಳವನ್ನು ಸಿಆರ್ಪಿಎಫ್ ನಿಧಿಗೆ ಅರ್ಪಿಸುತ್ತೇವೆ. ಉಗ್ರರ ಹೇಯ ಹೇಡಿ ಕೃತ್ಯವನ್ನು ನಾವು ಖಂಡಿಸುತ್ತೇವೆ. ಜೈ ಹಿಂದ್.
-ಅಬ್ದುಲ್ ಅಹದ್, ಡಿಸಿಪಿ ವೈಟ್ಫೀಲ್ಡ್ ವಿಭಾಗ