ಗುಂಪು ಚದುರಿಸಲು ಗುಂಡು ಹಾರಿಸಿದ ಗುತ್ತಿಗೆದಾರ !
ಬೆಂಗಳೂರು, ಮಾ.4: ಮದ್ಯದ ಅಮಲಿನಲ್ಲಿ ಯುವಕರ ಗುಂಪೊಂದು ಮಾರಾಮಾರಿ ಮಾಡಿಕೊಳ್ಳುತ್ತಿದ್ದ ವೇಳೆ ಗುಂಪು ಚದುರಿಸಲು ಗುತ್ತಿಗೆದಾರನೊಬ್ಬ ಗುಂಡು ಹಾರಿಸಿರುವ ಘಟನೆ ರಾಜಾಜಿನಗರದಲ್ಲಿ ನಡೆದಿದೆ.
ಗುತ್ತಿಗೆದಾರ ಹಾರಿಸಿದ ಗುಂಡು ಗಾಳಿಯಲ್ಲಿ ಸಿಡಿದಿದ್ದರಿಂದ ಯಾವುದೇ ಅನಾಹುತವಾಗಿಲ್ಲ ಎಂದು ತಿಳಿದುಬಂದಿದ್ದು, ಮಾರಾಮಾರಿಯಲ್ಲಿ ಕನ್ನಡ ಪರ ಸಂಘಟನೆಯೊಂದರ ಸದಸ್ಯ ಆದರ್ಶ ಹಾಗೂ ಮುಕೇಶ್ ಎಂಬುವರು ಗಾಯಗೊಂಡಿದ್ದಾರೆ.
ಪ್ರಕರಣ ಸಂಬಂಧ ಗುಂಡು ಹಾರಿಸಿದ ರಾಜಾಜಿನಗರದ ಗುತ್ತಿಗೆದಾರ ಮನೋಜ್ ಸೇರಿ ಐವರನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಕೈಗೊಳ್ಳಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಏನಿದು ಪ್ರಕರಣ: ರಾಜಾಜಿನಗರದ ಮದ್ಯದಂಗಡಿಯೊಂದರ ಬಳಿ, ಮದ್ಯದ ಅಮಲಿನಲ್ಲಿದ್ದ ಮುಕೇಶ್, ಆದರ್ಶ ಸೇರಿ ಐದಾರು ಮಂದಿ ಜಗಳ ಮಾಡುತ್ತಿದ್ದರು. ಜಗಳ ವಿಕೋಪಕ್ಕೆ ತಿರುಗಿದಾಗ ಆದರ್ಶ ಹಾಗೂ ಮುಕೇಶ್ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿ ಪರಾರಿಯಾಗಿದೆ ಎನ್ನಲಾಗಿದೆ.
ಹಲ್ಲೆ ಸಂಬಂಧ ಯುವಕರ ಗುಂಪನ್ನು ಆದರ್ಶ್ ಮತ್ತು ಮುಕೇಶ್ ಕಡೆಯ ಏಳೆಂಟು ಮಂದಿ ರಾತ್ರಿ 11 ಗಂಟೆಗೆ ಪ್ರಶ್ನಿಸಲು ಹೋದಾಗ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಗುಂಪನ್ನು ಚದುರಿಸಲು ಗುತ್ತಿಗೆದಾರ ಮನೋಜ್ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ರಾಜಾಜಿನಗರ ಠಾಣೆ ಪೊಲೀಸರು ಮನೋಜ್ನನ್ನು ವಶಕ್ಕೆ ಪಡೆದಿದ್ದಾರೆ. ಗುತ್ತಿಗೆದಾರ ಮನೋಜ್ ಪರವಾನಗಿ ಪಡೆದು ಪಿಸ್ತೂಲು ಇಟ್ಟುಕೊಂಡಿದ್ದಾರೆ ಎಂದು ತಿಳಿದುಬಂದಿದೆ.