ಬಿಡಿಎ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ ರೈತರು
ಬೆಂಗಳೂರು, ಮಾ.12: ನಗರದ ಹೊರವಲಯದ ಪೆರಿಫೆರಲ್ ರಿಂಗ್ ರಸ್ತೆ ಹಾಗೂ ಶಿವರಾಂ ಕಾರಂತ ಬಡಾವಣೆಯ ಯೋಜನೆಗಳ ಶಾಶ್ವತ ಪರಿಹಾರಕ್ಕಾಗಿ ಒತ್ತಾಯಿಸಿ ರೈತರು ಅನಿರ್ದಿಷ್ಟಕಾಲ ಧರಣಿ ಆರಂಭಿಸಿದ್ದಾರೆ.
ಮಂಗಳವಾರ ನಗರದ ಬಿಡಿಎ ಕೇಂದ್ರ ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಜಮಾಯಿಸಿದ ರೈತರು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಕಳೆದ 15 ವರ್ಷಗಳಿಂದ ಹೊರವಲಯದ ರಿಂಗ್ ರಸ್ತೆಯ ಯೋಜನೆಯೂ ಕಾಗದದಲ್ಲಿಯೇ ಉಳಿದಿದೆ. 2005ರಲ್ಲಿ ಪ್ರಾಥಮಿಕ ನೋಟಿಸ್ ನೀಡಿ, ಇದುವರೆಗೂ ರೈತರಿಗೆ ಪರಿಹಾರ ನೀಡಿಲ್ಲ. ಸರಕಾರ ನೆಪಕ್ಕೆ ಮಾತ್ರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿದೆ ಹೊರತು, ಶಾಶ್ವತ ಪರಿಹಾರಕ್ಕಾಗಿ ಮುಂದಾಗಿಲ್ಲ ಎಂದು ಧರಣಿ ನಿರತರು ದೂರಿದರು.
ಬಿಡಿಎ, 2013ರ ಭೂಸ್ವಾಧೀನ ಕಾಯ್ದೆಯನ್ವಯ ಪರಿಹಾರ ಕೊಡಲು ನ್ಯಾಯಲಯದಲ್ಲಿ ಹೇಳಿ ಲೆಕ್ಕ ಹಾಕುತ್ತಲೆ ಇದೆ. ಆದರೆ, ಸರಕಾರ ಮಾತ್ರ ಹಣ ನೀಡುತ್ತಿಲ್ಲ. ಈ ಹಿಂದಿನ ಸರಕಾರ ಈ ಯೋಜನೆಗೆ ಬಜೆಟ್ನಲ್ಲಿ ಹಣವನ್ನು ಮೀಸಲಿಟ್ಟಿತ್ತು. ಆದರೂ, ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದರು.