ಸಂಸತ್ಗೆ ಹೋಗಲು ಆಸೆ ಪಟ್ಟಿಲ್ಲ, ಸ್ಪರ್ಧೆ ಇಲ್ಲ: ರಾಮಲಿಂಗಾ ರೆಡ್ಡಿ
ಬೆಂಗಳೂರು, ಮಾ.20: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ನಾಯಕರು ಕೇಳಿದ್ದರು. ಆದರೆ, ನನಗೆ ಯಾವತ್ತೂ ಸಂಸತ್ಗೆ ಹೋಗಬೇಕೆಂದು ಅನಿಸಿಲ್ಲ. ಹೀಗಾಗಿ ಸ್ಪರ್ಧಿಸಲು ಇಚ್ಛಿಸಿಲ್ಲವೆಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಬಿಬಿಎಂಪಿ ಮೇಯರ್ ಆಗಬೇಕೆಂದು ತುಂಬಾ ಆಸೆಯಿತ್ತು. ಆದರೆ, ಶಾಸಕನಾಗುವ ಅವಕಾಶ ಸಿಕ್ಕಿತ್ತಷ್ಟೆ. ಆದರೆ, ಸಂಸತ್ಗೆ ಹೋಗಬೇಕೆಂದು ಯಾವತ್ತೂ ಆಸೆ ಪಟ್ಟವನಲ್ಲ ಎಂದು ತಿಳಿಸಿದರು.
ಶಾಸಕಿ ಸೌಮ್ಯಾರೆಡ್ಡಿ ಅವರು ಸ್ಪರ್ಧಿಸುತ್ತಾರೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ರಾಮಲಿಂಗಾರೆಡ್ಡಿ, ಈಗ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಅದರಲ್ಲೂ ನಮ್ಮಲ್ಲಿ ಈಗ ಶಾಸಕರ ಸಂಖ್ಯೆ ಕಡಿಮೆಯಿದೆ. ಹೀಗಾಗಿ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ಅವರು ಸ್ಪಷ್ಟಪಡಿಸಿದರು.
ಬೆಂಗಳೂರು ದಕ್ಷಿಣ ಲೋಕಸಭಾ ಚುನಾವಣಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಲು ಮೂರು ಮಂದಿ ಪ್ರಬಲ ಆಕಾಂಕ್ಷಿಗಳಿದ್ದಾರೆ. ಅವರಲ್ಲಿ ಒಬ್ಬರಿಗೆ ಹೈಕಮಾಂಡ್ ಟಿಕೆಟ್ ನೀಡಲಿದೆ. ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಒಟ್ಟಾಗಿ ಚುನಾವಣಾ ಪ್ರಚಾರ ನಡೆಸಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲಿದ್ದೇವೆಂದು ಅವರು ಹೇಳಿದರು.