ತುಮಕೂರು ಕ್ಷೇತ್ರ ಕೊಡಿಸದಿದ್ದರೆ ಭವಿಷ್ಯ ಕತ್ತಲಾದೀತು: ಕೆಪಿಸಿಸಿ ಮುಖಂಡ ಎಂ.ಡಿ.ಲಕ್ಷ್ಮಿ ನಾರಾಯಣ್
ಬೆಂಗಳೂರು, ಮಾ. 20: ತುಮಕೂರು ಕ್ಷೇತ್ರದ ಹಾಲಿ ಸಂಸದ ಮುದ್ದ ಹನುಮೇಗೌಡ ಅವರಿಗೆ ಸೀಟು ಕೊಡಿಸದಿದ್ದರೆ ಮುಂದಿನ ರಾಜಕೀಯ ಭವಿಷ್ಯ ಕತ್ತಲಾದೀತು. ನಿಮ್ಮ ಡಿಸಿಎಂ ಸ್ಥಾನ ಮುಖ್ಯವಲ್ಲ, ನಿಮ್ಮನ್ನು ನಂಬಿದ ಕಾರ್ಯಕರ್ತರು ಮುಖ್ಯ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ.ಲಕ್ಷ್ಮಿ ನಾರಾಯಣ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ಗೆ ಮನವಿ ಮಾಡಿದ್ದಾರೆ.
ಸತತ ಏಳು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಅಪಾರ ಅನುಭವ ಇದ್ದೂ ಹಾಲಿ ಸಂಸದರಿಗೆ ತುಮಕೂರು ಕ್ಷೇತ್ರವನ್ನು ಕೊಡದಿರುವುದು ಜಿಲ್ಲೆಯಲ್ಲಿ ಗೊಂದಲ ಸೃಷ್ಟಿಸಿದೆ. ಜತೆಗೆ ನಗೆಪಾಟಲಿಗೀಡಾಗುವ ಸಾಧ್ಯತೆಗಳಿವೆ. ಹೀಗಾಗಿ ಕೂಡಲೇ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಸಲಹೆ ಮಾಡಿದ್ದಾರೆ.
ಪಕ್ಷದ ಪ್ರಾಮಾಣಿಕ ಕಾರ್ಯಕರ್ತನಾಗಿ ಮುಂದಿನ ರಾಜಕೀಯ ಸೂಚನೆ ತಿಳಿಸಿರುವೆ. ಕಾರಣ ತಾವು ತುಂಬಾ ಬಿಡುವು ಇಲ್ಲದಿರುವ ಹಾಗೂ ಅನೇಕ ಬಾರಿ ತಮ್ಮ ಮನೆಗೆ ಹಾಗೂ ಕಚೇರಿಗೆ ಬಂದರೂ ಭೇಟಿ ಮಾಡಲು ಸಾಧ್ಯವಾಗಿಲ್ಲ. ನಿಮ್ಮೊಂದಿಗೆ ನಾವಿದ್ದೇವೆ. ದಿಟ್ಟ ಹೆಜ್ಜೆ ಇಡಿ ಎಂದು ಪ್ರಕಟಣೆಯಲ್ಲಿ ಅವರು ಮನವಿ ಮಾಡಿದ್ದಾರೆ.