ಬೋವಿ ಸಮುದಾಯಕ್ಕೆ ಟಿಕೆಟ್ ನೀಡದಿದ್ದರೆ ಬಿಜೆಪಿ ವಿರುದ್ಧ ಮತ: ಸಿದ್ಧರಾಮೇಶ್ವರ ಸ್ವಾಮೀಜಿ
ಬೆಂಗಳೂರ, ಮಾ.22: ಲೋಕಸಭಾ ಚುನಾವಣೆಯಲ್ಲಿ ಬೋವಿ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡದಿದ್ದರೆ ಬಿಜೆಪಿ ವಿರುದ್ಧ ಮತ ಹಾಕಲಾಗುವುದು ಎಂದು ಬೋವಿ ಗುರುಪೀಠದ ಸಿದ್ಧರಾಮೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಬೋವಿ ಸಮುದಾಯದ ಕೈ ತಪ್ಪಿದ ಹಿನ್ನೆಲೆಯಲ್ಲಿ ನಗರದ ಡಾಲರ್ಸ್ ಕಾಲನಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನಿವಾಸಕ್ಕೆ ಸಿದ್ದರಾಮೇಶ್ವರ ಸ್ವಾಮೀಜಿ ಭೇಟಿ ನೀಡಿ, ಬೋವಿ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಮತ್ತೊಮ್ಮೆ ಬೇಡಿಕೆ ಇಟ್ಟಿದ್ದಾರೆ.
ನಾಳೆ ಚಿತ್ರದುರ್ಗದಲ್ಲಿ ಬೋವಿ ಸಮುದಾಯದ ಬೃಹತ್ ಸಭೆ ಆಯೋಜಿಸಲಾಗಿದೆ. ನಾಳೆವರೆಗೂ ಕಾದು ನೋಡುತ್ತೇವೆ. ಸಮುದಾಯಕ್ಕೆ ಟಿಕೆಟ್ ನೀಡದೇ ಇದ್ದರೆ ಬಿಜೆಪಿ ವಿರುದ್ಧ ಮತ ಚಲಾಯಿಸುತ್ತೇವೆ. ಇಲ್ಲಿಯವರೆಗೂ ಬೋವಿ ಸಮುದಾಯ ಬಿಜೆಪಿ ಬೆನ್ನಿಗೆ ನಿಂತಿತ್ತು. ಆದರೂ ಬಿಜೆಪಿ ಕಡೆಯಿಂದ ಸಮುದಾಯಕ್ಕೆ ಅನ್ಯಾಯ ಮಾಡಲು ಹೊರಟಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿ.ಎಸ್.ಯಡಿಯೂರಪ್ಪ ಚಿತ್ರದುರ್ಗ ಅಥವಾ ಕೋಲಾರಕ್ಕೆ ಬೋವಿ ಸಮುದಾಯಕ್ಕೆ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಆದರೆ ಚಿತ್ರದುರ್ಗಕ್ಕೆ ಎ.ನಾರಾಯಣಸ್ವಾಮಿ ಹೆಸರು ಘೋಷಣೆ ಮಾಡಲಾಗಿದೆ. ನಾಳೆ ಚಿತ್ರದುರ್ಗದಲ್ಲಿ ಸಮುದಾಯದ ಬೃಹತ್ ಸಭೆ ಆಯೋಜಿಸಲಾಗಿದೆ. ನಾಳೆವರೆಗೂ ಕಾದು ನೋಡುತ್ತೇವೆ ಎಂದು ಅವರು ತಿಳಿಸಿದರು.
ಬೋವಿ ಸಮುದಾಯಕ್ಕೆ ಟಿಕೆಟ್ ನೀಡದೇ ಇದ್ದರೆ ಬಿಜೆಪಿ ವಿರುದ್ಧ ಮತ ಚಲಾಯಿಸುತ್ತೇವೆ ಹಾಗೂ ನಮ್ಮ ಸಮುದಾಯದ ಇಬ್ಬರು ಬಿಜೆಪಿ ಶಾಸಕರಾದ ಗೂಳಿಹಟ್ಟಿ ಶೇಖರ್ ಮತ್ತು ಚಂದ್ರಪ್ಪ ರಾಜೀನಾಮೆ ನೀಡಲು ಬದ್ಧರಿದ್ದಾರೆ.
-ಸಿದ್ಧರಾಮೇಶ್ವರ ಸ್ವಾಮೀಜಿ, ಬೋವಿ ಗುರುಪೀಠ