ವಕೀಲೆ ಧರಣಿ ಆತ್ಮಹತ್ಯೆ ಪ್ರಕರಣ: ಬಿಬಿಎಂಪಿ ಸದಸ್ಯ ಬಂಧನ
ಬೆಂಗಳೂರು, ಮಾ.23: ವಕೀಲೆ ಧರಣಿ ಆತ್ಮಹತ್ಯೆ ಪ್ರಕರಣ ಸಂಬಂಧ ಬಿಬಿಎಂಪಿ ಸದಸ್ಯನೋರ್ವನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ನಗರದ ಎ.ನಾರಾಯಣಪುರದ ಬಿಬಿಎಂಪಿ ಸದಸ್ಯ ವಿ.ಸುರೇಶ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದು, ಶುಕ್ರವಾರ ರಾತ್ರಿ ತಮಿಳುನಾಡಿನ ಸೇಲಂ ಬಳಿಯ ಎರ್ರಾಕಾಡ್ ರೆಸಾರ್ಟ್ನಲ್ಲಿ ಈತನನ್ನು ಸೆರೆ ಹಿಡಿಯಲಾಗಿದೆ ಎಂದು ತಿಳಿದುಬಂದಿದೆ.
ವಿ.ಸುರೇಶ್ನನ್ನು ವೈದ್ಯಕೀಯ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಬಳಿಕ ರಾತ್ರಿಯೇ ಕೋರಮಂಗಲದಲ್ಲಿರುವ ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಾಯಿತು. ವಿಚಾರಣೆ ನಂತರ, ನ್ಯಾಯಾಧೀಶರು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು.
ಪ್ರಕರಣ ಸಂಬಂಧ ಈಗಾಗಲೇ 10 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದ್ದು, ಧರಣಿ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿಬಂದ ಬಳಿಕ, ವಿ.ಸುರೇಶ್ ತಲೆಮರೆಸಿಕೊಂಡಿದ್ದ. ತಮಿಳುನಾಡಿನ ಸೇಲಂ ಬಳಿಯಿರುವ ರೆಸಾರ್ಟ್ನಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ಸಿಐಡಿ ತನಿಖಾ ತಂಡ, ಅಲ್ಲಿಗೆ ತೆರಳಿ ಬಂಧಿಸಿ ಕರೆ ತಂದಿದ್ದಾರೆ.
ಕಿರುಕುಳ
ಧರಣಿ ಆತ್ಮಹತ್ಯೆ 2018ರ ಡಿ.30 ರಂದು ಯುವ ವಕೀಲೆ ಎಸ್.ಧರಣಿ, ಮಹದೇವಪುರ ಠಾಣಾ ವ್ಯಾಪ್ತಿಯ ಉದಯನಗರದ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಬಿಬಿಎಂಪಿ ಸದಸ್ಯ ವಿ.ಸುರೇಶ್ ಸೇರಿದಂತೆ ಕೆಲವರು ಕಿರುಕುಳ ನೀಡಿರುವ ಆರೋಪ ಕೇಳಿಬಂದಿತ್ತು.