ಎಲ್ಲರೂ ಆರ್ಥಿಕವಾಗಿ ಸಶಕ್ತರಾದರೆ ಜಾತಿ ವಿನಾಶ ಸಾಧ್ಯ: ಮಾಜಿ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಮಾ.23: ಎಲ್ಲ ಸಮುದಾಯಗಳೂ ಆರ್ಥಿಕವಾಗಿ ಸಶಕ್ತರಾದರೆ ಜಾತಿಯ ವಿನಾಶ ಮಾಡಲು ಸಾಧ್ಯವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶನಿವಾರ ನಗರದ ಗಾಂಧೀ ಭವನದಲ್ಲಿ ಡಾ.ರಾಮಮನೋಹರ ಲೋಹಿಯಾ ಸಮತಾ ವಿಶ್ವವಿದ್ಯಾಲಯ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಿದ್ದ ‘ಲೋಹಿಯಾ ದಿನಾಚರಣೆ ಹಾಗೂ ಇಂದಿಗೂ ಬೇಕಾದ ಲೋಹಿಯಾ ಪುಸ್ತಕ ಬಿಡುಗಡೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಾತಿ ಚಲನೆಯಿಲ್ಲದ ವ್ಯವಸ್ಥೆಯಾಗಿದೆ. ವರ್ಗ ಚಲನೆಯಿರುವ ಜಾತಿಯಾಗಿದ್ದು, ಸಮಾಜದಲ್ಲಿ ಜಾತಿ ವ್ಯವಸ್ಥೆ ಬದಲಾಗುವುದು ಕಷ್ಟಕರವಾದುದು ಎಂದು ಲೋಹಿಯಾ ಹೇಳುತ್ತಿದ್ದರು. ಇವನಾರವ, ಇವನಾರವ, ಇವ ನಮ್ಮವ, ಇವ ನಮ್ಮವ ಎಂದು ಬಸವಣ್ಣನ ಕಾಲದಿಂದಲೂ ಹೇಳಲಾಗುತ್ತಿದೆ. ಆದರೂ ಬದಲಾಗಿಲ್ಲ ಎಂದ ಅವರು, ದಲಿತ, ಹಿಂದುಳಿದ ಹಾಗೂ ಮಹಿಳೆಯರು ಸಂಪೂರ್ಣವಾಗಿ ಆರ್ಥಿಕ ಸಬಲರಾದಾಗ ಮಾತ್ರ ಈ ವ್ಯವಸ್ಥೆ ನಾಶವಾಗುತ್ತದೆ ಎಂದರು.
ಭಾರತದಲ್ಲಿ ಲೋಹಿಯಾ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸಾಮಾಜಿಕ ಸಮಸ್ಯೆಗಳು, ಆರ್ಥಿಕ ಸಮಸ್ಯೆಗಳ ಕುರಿತು ಆಳವಾದ ಅಧ್ಯಯನ ನಡೆಸಿ ಪರಿಹಾರ ಸೂಚಿಸಿದ್ದಾರೆ. ಇಂದು ಸಿದ್ಧಾಂತಗಳನ್ನು ಪ್ರತಿಪಾದಿಸುವವರು ವಿದೇಶಿ ಸಿದ್ಧಾಂತವನ್ನೇ ಅವಲಂಬಿಸಿದ್ದಾರೆ. ಆದರೆ, ಲೋಹಿಯಾ ಸ್ವದೇಶಿ ಸಿದ್ಧಾಂತವನ್ನು ಪ್ರತಿಪಾದಿಸಿದ ಅಪರೂಪದ ರಾಜಕಾರಣಿ ಎಂದು ಹೇಳಿದರು.
ರಾಮಮನೋಹರ ಲೋಹಿಯಾ ತಮ್ಮ ಬದುಕಿನಲ್ಲಿ ದೇಶಕ್ಕೆ ಬೇಕಾದ ಆರ್ಥಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ರಾಜಕೀಯ ಸಿದ್ಧಾಂತಗಳನ್ನು ಜನರ ಮುಂದಿಟ್ಟಿದ್ದಾರೆ. ಜಾತಿ, ವರ್ಗ, ಲಿಂಗ ತಾರತಮ್ಯ, ರೈತರು, ಮಹಿಳೆಯರು ಹೀಗೆ ಎಲ್ಲ ವಿಧಾನಗಳಲ್ಲಿಯೂ ಸಮಗ್ರವಾದ, ಆಳವಾದ ಅಧ್ಯಯನ ನಡೆಸಿ ತಮ್ಮ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ ಎಂದು ನುಡಿದರು.
ಸರಕಾರಗಳು ಅನುಷ್ಠಾನಕ್ಕೆ ತಂದ ಹಲವು ಜನಪ್ರಿಯ ಕಾರ್ಯಕ್ರಮಗಳ ಹಿಂದೆ ಲೋಹಿಯಾಯವರ ಚಿಂತನೆ ಸಿದ್ಧಾಂತಗಳಿವೆ. ದೇಶದಲ್ಲಿ ಕಾಡುತ್ತಿರುವ ಹಲವು ಸಮಸ್ಯೆಗಳ ನಿವಾರಣೆಗೆ ತಮ್ಮದೇ ಆದ ಸಿದ್ಧಾಂತಗಳ ಮೂಲಕ ಪರಿಹಾರ ಕಂಡುಕೊಳ್ಳಲು ನೆರವಾದ ಅಪರೂಪದ ರಾಜಕಾರಣಿ. ಲೋಹಿಯಾ ಚಿಂತನೆಗಳು ಇಂದಿನ ಸರಕಾರದ ಆಡಳಿತಕ್ಕೂ ಪೂರಕವಾಗಿದೆ ಎಂದು ಹೇಳಿದರು. ಕರ್ನಾಟಕದಲ್ಲಿ ರೂಪಗೊಂಡ ಕಾಗೋಡು ಚಳವಳಿಗೆ ಲೋಹಿಯಾ ಪ್ರೇರಣೆಯಾಗಿದ್ದಾರೆ. ಅಲ್ಲದೆ, ಈ ಹೋರಾಟದಿಂದ ರಾಜ್ಯದಲ್ಲಿ ಭೂಸುಧಾರಣಾ ಕಾಯ್ದೆ ಜಾರಿಯಾಯಿತು. ಅದೇ ರೀತಿ ಅಧಿಕಾರ ಒಂದೇ ಕಡೆ ಕೇಂದ್ರೀಕೃತವಾಗಬಾರದು ಎಂಬುದು ಲೋಹಿಯಾ ವಾದವಾಗಿತ್ತು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲಾ, ಮಂಡಲ್ ಪಂಚಾಯತ್ಗಳನ್ನು ಸ್ಥಾಪಿಸುವ ಮೂಲಕ ಅಧಿಕಾರ ವಿಸ್ತರಿಸಿದ್ದರು ಎಂದು ನೆನಪಿಸಿಕೊಂಡರು.
ಪುರಾಣಗಳಲ್ಲಿ, ಧರ್ಮ ಗ್ರಂಥಗಳಲ್ಲಿ ಹೆಣ್ಣಿಗೆ ಅತ್ಯಂತ ಗೌರವಯುತವಾದ ಸ್ಥಾನಮಾನ ನೀಡಲಾಗಿದೆ. ಆದರೆ, ಅನುಸರಿಸಬೇಕಾದರೆ ಹೆಣ್ಣನ್ನು ಶೋಷಿಸಲಾಗುತ್ತಿದೆ. ಅವರಿಗೆ ತಾರತಮ್ಯ ಮಾಡಲಾಗುತ್ತಿದೆ. ಕೆಳವರ್ಗದವರಂತೆ ಮೇಲ್ವರ್ಗದಲ್ಲಿನ ಹೆಣ್ಣು ಮಕ್ಕಳೂ ಶೋಷಣೆಗೆ ಒಳಗಾಗುತ್ತಿದ್ದಾರೆ. ಮಹಿಳೆಯರಿಗೆ ಸಮಾನವಾದ ಮೀಸಲಾತಿ ಅಗತ್ಯವಿದೆ. ಪಂಚಾಯತ್ ಚುನಾವಣೆಯಲ್ಲಿ ಶೇ.50 ರಷ್ಟು ಮೀಸಲಾತಿಯಿದೆ. ಅದೇ ರೀತಿ ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಮೀಸಲಾತಿ ನೀಡುವ ಸಂಬಂಧ 96-97 ರಲ್ಲಿ ಕಾಯ್ದೆ ಮಾಡಿದ್ದರೂ, ಅದು ಜಾರಿಯಾಗದಿರುವುದು ದುರಂತ ಎಂದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಲೋಹಿಯಾ ಅಹಿಂಸಾ ತತ್ವಗಳ ಮೇಲೆ ಹೋರಾಟ ನಡೆಸಬೇಕೆಂದು ಬಲವಾಗಿ ನಂಬಿದ್ದರು. ಅವರ ಹಾದಿಯಲ್ಲಿ ಸಾಗಿಬಂದ ನಾನು ಅಹಿಂಸಾ ತತ್ವದ ನೆಲೆಗಟ್ಟಿನಲ್ಲಿ ಹೋರಾಟ ನಡೆಸಿಕೊಂಡು ಬಂದಿದ್ದೇನೆ. ಸಮಾಜದಲ್ಲಿ ಜಾತಿಯ ವಿಷ ಬೀಜ ಬೇರೂರಿದೆ. ಅದು ಸಮಾಜದಿಂದ ತೊಲಗಬೇಕಾದರೆ ಸಾಮಾನ್ಯ ಶಕ್ತಿಯಿದ ಅಸಾಧ್ಯವೆಂದು ನೋವಿನಿಂದ ಲೋಹಿಯಾ ಹೇಳುತ್ತಿದ್ದರು ಎಂದು ತಿಳಿಸಿದರು.
ಸಮಾಜದಲ್ಲಿ ಏನಾದರೂ ಒಳ್ಳೆಯದು ಮಾಡಬೇಕು. ಹಿಂದುಳಿದವರು ದಲಿತ ಸಮುದಾಯಕ್ಕೆ ನ್ಯಾಯ ದೊರಕಿಸಿ ಕೊಡಬೇಕು ಎಂದು ನಡೆಸುವ ಹೋರಾಟಗಳು ಅಧಿಕಾರಿಗಳಿಗೆ ಅರ್ಥವಾಗಲ್ಲ ಎಂದ ಅವರು, ಮೀಸಲಾತಿಯ ಲಾಭಪಡೆದ ಎಸ್ಸಿ-ಎಸ್ಟಿ ವರ್ಗದ ಅಧಿಕಾರಿಗಳು ತಮ್ಮ ಹುಟ್ಟಿದ ಊರಿನ ಕಡೆ ಮುಖ ಹಾಕಿ ಮಲಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾಗಿ ಪ್ರೊ.ರವಿವರ್ಮ ಕುಮಾರ್, ಬರಹಗಾರ ನಟರಾಜ್ ಹುಳಿಯಾರ್, ಸಚಿವ ಬಿ.ಝಡ್.ಝಮೀರ್ ಅಹ್ಮದ್ ಖಾನ್, ನೆಲಸಿರಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾ ಬಸವರಾಜು, ಸಮತಾ ವಿದ್ಯಾಲಯ ಅಧ್ಯಕ್ಷ ಪ್ರೊ.ಕೆ. ದೊರೈರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ನಾನು ರಾಜಕೀಯಕ್ಕೆ ಬರಲು ಹಿರಿಯ ರೈತ ಮುಖಂಡ ನಂಜುಂಡಸ್ವಾಮಿ ಹಾಗೂ ಸಮಾಜವಾದಿ ಚಿಂತಕ ರಾಮಮನೋಹರ ಲೋಹಿಯಾ ಪ್ರೇರಣೆಯಾಗಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ ಇವರು ನನ್ನನ್ನು ಆಕರ್ಷಿಸಿದ್ದರು. ಇಂದಿನ ಯುವ ಸಮುದಾಯ, ಅದರಲ್ಲಿಯೂ ರಾಜಕೀಯಕ್ಕೆ ಬರುವವರು ಗಾಂಧಿ, ಅಂಬೇಡ್ಕರ್, ಲೋಹಿಯಾರ ವಿಚಾರಗಳನ್ನು ಕಡ್ಡಾಯವಾಗಿ ಓದಬೇಕು.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಲೋಹಿಯಾ ಅವರ ಚಿಂತನೆಗಳಲ್ಲಿ ಎಂದಿಗೂ ತಾರುಣ್ಯವನ್ನು ಕಾಣುತ್ತೇವೆ. ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಹೆಚ್ಚಿಗೆ ಲೋಹಿಯಾ ಚಿಂತನೆ ಕಡೆಗೆ ಆಕರ್ಷಿತವಾಗುತ್ತಿದೆ. ಅಂಬೇಡ್ಕರ್, ಗಾಂಧಿ, ಲೋಹಿಯಾ ಮೂರು ಜನ ಬೆಸೆದಾಗ ಹೊಸದೊಂದು ಜನಾಂಗ ಹುಟ್ಟುತ್ತದೆ.
-ನಟರಾಜ್ ಹುಳಿಯಾರ್, ಅಂಕಣಕಾರ