ವೇಶ್ಯಾವಾಟಿಕೆ ದಂಧೆ: ಮೂವರ ಬಂಧನ
ಬೆಂಗಳೂರು, ಮಾ.27: ಹಣದ ಆಸೆಗಾಗಿ ಹೊರ ರಾಜ್ಯಗಳಿಂದ ಯುವತಿಯರನ್ನು ಮಾನವ ಕಳ್ಳ ಸಾಗಾಣಿಕೆ ಮಾಡಿಕೊಂಡು, ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದಡಿ ಮೂವರನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಮುನೇಶ್ವರ ಬ್ಲಾಕ್ನ ಹೊನ್ನೇಗೌಡ(40), ಪಟೇಗಾರ ಪಾಳ್ಯದ ಕನಕನಗರ ಗಿರೀಶ್(35) ಹಾಗೂ ಸುನೀಲ್ ಎಂಬವರು ಬಂಧಿತ ಆರೋಪಿಗಳೆಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ಅಗ್ರಹಾರ ದಾಸರಹಳ್ಳಿಯ 9ನೆ ಮುಖ್ಯರಸ್ತೆಯಲ್ಲಿರುವ ಬಾಲಾಜಿ ರೆಸಿಡೆನ್ಸಿ ಇಂಟರ್ನ್ಯಾಷನಲ್ ಹೆಸರಿನ ಲಾಡ್ಜ್ನಲ್ಲಿ ಹೊರ ರಾಜ್ಯದಿಂದ ಯುವತಿಯರನ್ನು ಸಾಗಾಣಿಕೆ ಮಾಡಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಪ್ರಕರಣದಲ್ಲಿ ಹೊರ ರಾಜ್ಯದ 3 ಯುವತಿಯರನ್ನು ವೇಶ್ಯಾವಾಟಿಕೆಯಿಂದ ಸಂರಕ್ಷಣೆ ಮಾಡಲಾಗಿದ್ದು, ಆರೋಪಿಗಳಿಂದ 4 ಮೊಬೈಲ್, 4 ಸಾವಿರ ರೂ. ನಗದು ಜಪ್ತಿ ಮಾಡಿ, ಇಲ್ಲಿನ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ. ಇದೇ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಾದ ಸಿ.ಜೆ.ಗೋಪಿನಾಥ್ ನಾಯ್ಡು, ರೂಪಾ, ಲಲಿತಾ ಎಂಬುವರಿಗೆ ಶೋಧ ನಡೆಸಲಾಗುತ್ತಿದೆ.