ಕ್ರೈಸ್ತ ಸಮುದಾಯ ಪ್ರಮಾಣಿಕರಲ್ಲ ಎಂಬ ಈಶ್ವರಪ್ಪರ ಹೇಳಿಕೆ ಹಿಂಪಡೆಯಲು ಆಗ್ರಹ
ಬೆಂಗಳೂರು, ಎ.15: ಕ್ರೈಸ್ತ ಸಮುದಾಯ ಈ ದೇಶದ ಪ್ರಾಮಾಣಿಕ ಪ್ರಜೆಗಳಲ್ಲ. ಆದ್ದರಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಅವಕಾಶ ನೀಡಲಿಲ್ಲ ಎಂಬ ಬಿಜೆಪಿ ಮುಖಂಡ ಈಶ್ವರಪ್ಪ ಹೇಳಿಕೆಯನ್ನು ಹಿಂಪಡೆಯಲು ಕರ್ನಾಟಕ ಕ್ರೈಸ್ತರ ಸಾಮಾಜಿಕ ಕ್ಷೇಮಾಭಿವೃದ್ಧಿ ಅಸೋಸಿಯೇಷನ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಕೇಂದ್ರ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಅರುಣ್ ಫರ್ನಾಂಡೀಸ್, ಪ್ರಾಮಾಣಿಕ, ಕರ್ತವ್ಯ ನಿಷ್ಠೆ ಹಾಗೂ ರಾಜ ನಿಷ್ಠೆಯ ಕೈಸ್ತ ಸಮುದಾಯವೂ ದೇಶಕ್ಕೆ ಸೇವೆ ಸಲ್ಲಿಸುತ್ತಿದೆ. ಹೀಗಿದ್ದಾಗ ಈಶ್ವರಪ್ಪ ಇಂತಹ ಹೇಳಿಕೆಯನ್ನು ನೀಡಿರುವುದು ಸಮುದಾಯದ ಭಾವನಗಳಿಗೆ ತೀವ್ರ ನೋವುಂಟಾಗಿದೆ. ಅಲ್ಲದೆ, ಅವರ ಮೊಮ್ಮಕ್ಕಳು ಕ್ರೈಸ್ತ ಶಾಲೆಗಳಲ್ಲಿ ಶಿಕ್ಷಣವನ್ನು ಪಡೆದಿದ್ದಾರೆ. ಇಂತಹ ಹೇಳಿಕೆಯನ್ನು ಈಶ್ವರಪ್ಪ ನೀಡಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ರಾಜಕೀಯವಾಗಿ ರಾಜಕರಣಿಗಳು ಆರೋಗ್ಯಕರ ಚರ್ಚೆಯನ್ನು ಮಾಡಬೇಕೇ ಹೊರತು ಸಮುದಾಯವನ್ನು ಈ ರೀತಿಯಲ್ಲಿ ದೂಷಣೆ ಮಾಡಬಾರದು. ಸಮುದಾಯವು ದೇಶದ ಅಭಿವೃದ್ಧಿಗೆ ನಾನಾ ಕ್ಷೇತ್ರಗಳಲ್ಲಿ ಪ್ರಾಮಾಣಿಕ ಸೇವೆಯನ್ನು ನೀಡುತ್ತಾ ಬರುತ್ತಿದ್ದು, ಶೈಕ್ಷಣಿಕ, ಆರೋಗ್ಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ನೀಡುತ್ತಿರುವ ಕೊಡುಗೆಯನ್ನು ದೇಶದ ಪ್ರತಿಯೊಬ್ಬರೂ ಕೊಂಡಾಡುತ್ತಾರೆ ಎಂದು ಸ್ಮರಿಸಿದರು.