ಉದ್ದೇಶಪೂರ್ವಕವಾಗಿ ಮತಪಟ್ಟಿಯಿಂದ ಮತದಾರರ ಹೆಸರು ಡಿಲೀಟ್ ಮಾಡಿದ್ದಾರೆ: ಆರ್.ಅಶೋಕ್ ಆರೋಪ
ಬೆಂಗಳೂರು, ಎ.19: ಬಿಬಿಎಂಪಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಪ್ರತಿ ಬೂತ್ನಲ್ಲಿಯೂ 50ರಿಂದ 60 ಜನರ ಹೆಸರು ಮತಪಟ್ಟಿಯಿಂದ ಡಿಲೀಟ್ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪತ್ನಿಯ ಹೆಸರು ಇದ್ದರೆ ಪತಿಯ ಹೆಸರು ಇಲ್ಲ. ಪತಿಯ ಹೆಸರು ಇದ್ದರೆ ಪತ್ನಿಯ ಹೆಸರು ಇರಲ್ಲ. ಮತದಾರರ ಹೆಸರನ್ನು ಯಾಕೆ ತಗೆದು ಹಾಕಲಾಗಿದೆ ಎಂದು ಪಾಲಿಕೆಯವರು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ಮತದಾರ ಪಟ್ಟಿಯಿಂದ ಅನೇಕರ ಹೆಸರು ತೆಗೆದು ಹಾಕಿದ್ದಾರೆ. ಅಮೆರಿಕದಿಂದ ಬಂದವರು ಮತದಾನ ಮಾಡಲು ಅವಕಾಶ ಸಿಗದೇ ಕಣ್ಣೀರು ಹಾಕಿದ್ದಾರೆ. ಇದು ಪಾಲಿಕೆ ಎಸಗಿದ ಲೋಪವಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ 2 ಲಕ್ಷ ವೋಟ್ ಮಿಸ್ ಆಗಿವೆ. ಈ ಬಗ್ಗೆ ತನಿಖೆ ನಡೆಸುವಂತೆ ಚುನಾವಣೆ ಆಯೋಗವನ್ನು ಒತ್ತಾಯಿಸುತ್ತೇವೆ. ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಇದರಲ್ಲಿ ಕಾರ್ಪೋರೇಷನ್ ಅಧಿಕಾರಿಗಳು ಶಾಮೀಲಾಗಿದ್ದಾರೆ. ಮುಂದೆ ಹೀಗೆ ಆಗದಂತೆ ಎಚ್ಚರ ವಹಿಸಬೇಕು ಎಂದರು.
ಒಂದು ಸಮುದಾಯದ ಮೇಲೆ ಗುರಿ ಇಟ್ಟುಕೊಂಡು ಈ ರೀತಿಯ ಕೆಲಸ ಮಾಡಲಾಗಿದೆ. ಮಾ.16ರಂದು ನೀಡಿದ ಪಟ್ಟಿಯಲ್ಲಿ ಮತದಾರರ ಹೆಸರು ಇತ್ತು. ನಿನ್ನೆಯ ಪಟ್ಟಿಯಲ್ಲಿ ಬಹುತೇಕರ ಹೆಸರು ಡಿಲೀಟ್ ಮಾಡಿದ್ದಾರೆ. ಇದಕ್ಕೆ ಪಾಲಿಕೆ ಅಧಿಕಾರಿಗಳೇ ಕಾರಣ. ಮತದಾರರ ಪಟ್ಟಿಯಿಂದ ಈ ಬಾರಿ ಕೈಬಿಟ್ಟಿದ್ದವರು ವಿಧಾನಸಭಾ ಚುನಾವಣೆಯಲ್ಲಿ ವೋಟ್ ಮಾಡಿದ್ದಾರೆ. ಈಗ ಅದು ಹೇಗೆ ಡಿಲೀಟ್ ಆಯಿತು. ಬೇಕಾದರೆ ಮತದಾರ ಪಟ್ಟಿಯಿಂದ ಹೆಸರು ಕೈಬಿಟ್ಟವರನ್ನು ಕರೆದುಕೊಂಡು ಬರುತ್ತೇನೆ. ಇದೇ ಕಾರಣಕ್ಕೆ ಈ ಬಾರಿ ಮತದಾನ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಿದರು.
ಮೊದಲ ಹಂತದ ಚುನಾವಣೆಯಲ್ಲಿ ಅತಿ ಉತ್ಸಾಹದಿಂದ ಜನರು ವೋಟ್ ಮಾಡಿದ್ದಾರೆ. ವೃದ್ಧರೂ, ಗರ್ಭಿಣಿಯರು, ಮಾತೆಯರು, ಮತದಾನದ ಹಬ್ಬದಲ್ಲಿ ಭಾಗವಹಿಸಿದ್ದರು. ಮತದಾನ ಮಾಡಿದ ಎಲ್ಲರಿಗೂ ಬಿಜೆಪಿ ಕಡೆಯಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದರು.