ಐಎಂಎ ಬಹುಕೋಟಿ ವಂಚನೆ ಪ್ರಕರಣ: ಸಂಸ್ಥೆಯ 6 ನಿರ್ದೇಶಕರು ಶರಣು ?
ಬೆಂಗಳೂರು, ಜೂ.12: ಐಎಂಎ ಸಮೂಹ ಸಂಸ್ಥೆಗಳ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಸಂಸ್ಥೆಯ ಆರು ನಿರ್ದೇಶಕರು ಇಲ್ಲಿನ ಪೂರ್ವ ವಿಭಾಗದ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ನಾಸೀರ್ ಹುಸೇನ್, ನವೀದ್ ಅಹ್ಮದ್ ನಟ್ಮಾಕರ್, ನಿಜಾಮುದ್ದೀನ್ ಯಾನೆ ಅಜೀಮುದ್ದೀನ್, ಆಫ್ಸಾನ್ ತಬಸ್ಸುಮ್, ಆಪ್ಸರ್ ಪಾಷಾ ಹಾಗೂ ಅರ್ಶದ್ ಎಂಬುವರು ಐಎಂಎ ನಿರ್ದೇಶಕರಾಗಿದ್ದು, ಇವರು ಮಂಗಳವಾರ ತಡರಾತ್ರಿ ಪೊಲೀಸರಿಗೆ ಶರಣಾಗಿರುವುದಾಗಿ ವರದಿಯಾಗಿದೆ. ತಲೆಮರೆಸಿಕೊಂಡಿರುವ ಐಎಂಎ ಮುಖ್ಯಸ್ಥ ಮುಹಮ್ಮದ್ ಮನ್ಸೂರ್ ಖಾನ್ ಇವರನ್ನು ನೇಮಕಮಾಡಿ, ಹಣ ಹೂಡಿಕೆ ಸಂಬಂಧ ಹೆಚ್ಚಿನ ಜವಾಬ್ದಾರಿ ನೀಡಿದ್ದ ಎಂದು ಹೇಳಲಾಗುತ್ತಿದೆ.
ದುಬೈನಲ್ಲೂ ಐಎಂಎ ಶಾಪ್?
ಮುಹಮ್ಮದ್ ಮನ್ಸೂರ್ ಖಾನ್ ಐಎಂಎ ಚಿನ್ನಾಭರಣ ಮಳಿಗೆ ಮಾದರಿಯಲ್ಲಿಯೇ ಪೂರ್ವ ದುಬೈನಲ್ಲಿ ಚಿನ್ನಾಭರಣ ಮಳಿಗೆ ಆರಂಭಿಸಿದ್ದಾನೆ. ಆತನ ಸಂಬಂಧಿಕರು ಅಲ್ಲಿನ ವ್ಯವಹಾರ ನೋಡಿಕೊಳ್ಳುತ್ತಾರೆ. ಸ್ವತಃ ಮನ್ಸೂರ್, ಈ ಬಗ್ಗೆ ಕೆಲ ದಿನಗಳ ಹಿಂದೆ ಫೇಸ್ಬುಕ್ನಲ್ಲಿ ಮಾಹಿತಿ ಹಂಚಿಕೊಂಡಿದ್ದ ಎಂದು ತಿಳಿದುಬಂದಿದೆ.
ದುಬೈನಲ್ಲಿ ಮನ್ಸೂರ್?
ತಲೆಮರೆಸಿಕೊಂಡಿರುವ ಐಎಂಎ ಮುಖ್ಯಸ್ಥ ಮುಹಮ್ಮದ್ ಮನ್ಸೂರ್ ಖಾನ್, ದುಬೈನಲ್ಲಿರುವ ತನ್ನ ಪತ್ನಿಯ ಬಳಿ ತೆರಳಿದ್ದಾನೆ. ಕೇರಳ ಮೂಲದ ಮಹಿಳೆಯೊಬ್ಬಾಕೆಯನ್ನು ವಿವಾಹವಾಗಿದ್ದ ಈತ, ದುಬೈನಲ್ಲಿ ವಾಸ್ತವ್ಯ ಇರುವಂತೆ ಪತ್ನಿಗೆ ಹೇಳಿದ್ದ ಎಂದು ಮೂಲಗಳು ತಿಳಿಸಿವೆ.