ಎಪಿಎಸ್ ಕಾಲೇಜು ವಿದ್ಯಾರ್ಥಿಗಳಿಂದ ಸ್ವಯಂಚಾಲಿತ ತ್ರಿಚಕ್ರ ವಾಹನ ಅನಾವರಣ
ಸ್ಮಾರ್ಟ್ ಸಿಟಿ ಯೋಜನೆಯ ವಿವಿಧ ಮಾದರಿಗಳ ಪ್ರದರ್ಶನ
ಬೆಂಗಳೂರು, ಜೂ.22: ಎಪಿಎಸ್ ಕಾಲೇಜಿನ ಮೆಕ್ಯಾನಿಕಲ್ ಹಾಗೂ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳು ತಯಾರಿಸಿರುವ ಪರಿಸರ ಸ್ನೇಹಿ ಸ್ವಯಂಚಾಲಿತ ತ್ರಿಚಕ್ರ ವಾಹನ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯ ವಿವಿಧ ಮಾದರಿಗಳನ್ನು ಅನಾವರಣಗೊಳಿಸಿದ್ದಾರೆ.
ಶನಿವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಬಿ.ಎಂ.ಸತೀಶ್, ವಿಕಲಚೇತನರಿಗೆ ಉಪಯುಕ್ತವಾದ ವಿಶೇಷ ಮಾದರಿಯ ತ್ರಿಚಕ್ರ ವಾಹನ ಪರಿಸರ ಸ್ನೇಹಿಯಾಗಿದ್ದು 3 ಗಂಟೆಗಳ ಕಾಲ ಬಿಸಿಲಿನಲ್ಲಿ ನಿಲ್ಲಿಸಿದರೆ ಸುಮಾರು 40 ಕಿ.ಮೀಟರ್ ವರೆಗೂ ಚಲಿಸುತ್ತದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆ ಸಮಾರು 100 ನಗರಗಳಲ್ಲಿ ಪ್ರಾರಂಭಿಸುವುದಾಗಿ ಘೋಷಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಇದರಿಂದ ಉತ್ತೇಜಿತರಾದ ವಿದ್ಯಾರ್ಥಿಗಳು ಸ್ಮಾರ್ಟ್ ಸಿಟಿ ಯೋಜನೆಯ ಪರಿಕಲ್ಪನೆಯ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಸ್ಟ್ರೀಟ್ ಮಾರ್ಟ್ ರಸ್ತೆ ದೀಪಗಳು, ಸ್ಮಾರ್ಟ್ ಹೆದ್ದಾರಿ, ಪಾರ್ಕಿಂಗ್, ರೈಲ್ವೆ, ಸಂಚಾರ ವ್ಯವಸ್ಥೆ ಫೈರ್ ನಿರ್ವಹಣೆ, ಮನೆಗಳು ಸೇರಿದಂತೆ ಅನೇಕ ಮಾದರಿ ಯನ್ನೊಳಗೊಂಡ ಯೋಜನೆಗಳು ಅಭಿವೃದ್ಧಿಯ ಸಂಕೇತಗಳಾಗಿವೆ ಎಂದು ಹೇಳಿದರು.