ವಿಚಾರ ಕ್ರಾಂತಿಯ ಮೂಲಕ ಸಮಾಜ ಪರಿವರ್ತನೆ: ಎಚ್.ಎಸ್.ದೊರೆಸ್ವಾಮಿ
ಬೆಂಗಳೂರು, ಜೂ.30: ವಿಚಾರ ಕಾಂತ್ರಿಯಿಂದಲೇ ಸಮಾಜವನ್ನು ಪರಿವರ್ತನೆಗೊಳಿಸಲು ಸಾಧ್ಯ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ.ಎಚ್.ಎಸ್.ದೊರೆಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಜಯನಗರ ಜೆ.ಎಸ್.ಎಸ್ ಚಿಂತನ ಮಂಟಪದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಡಾ..ಗು.ಹಳಕಟ್ಟಿ ಜನ್ಮದಿನೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದು ಸಮಾಜದ ಬಗ್ಗೆ ಚಿಂತಿಸುವವರು ಕಡಿಮೆಯಾಗಿದ್ದಾರೆ. ಸಮಾಜದಲ್ಲಿ ಮಾನವೀಯ ಗುಣಕ್ಕೆ ಬೆಲೆ ಇಲ್ಲದಂತಾಗಿದೆ. ನಾವೆಲ್ಲರೂ ಮನುಷ್ಯ ಸಮಾಜವನ್ನು ಕಟ್ಟಬೇಕಾದರೆ ಎಲ್ಲರಲ್ಲೊಬ್ಬರಾಗಿ ಜಾತಿ, ಧರ್ಮ ಮರೆತು ಸಮಾಜವನ್ನು ಮುನ್ನಡೆಸಬೇಕಿದೆ ಎಂದರು.
ಬಸವಣ್ಣನವರ ವಚನ ಸಾಹಿತ್ಯ ,ಕ್ರಾಂತಿ ವಿಚಾರಧಾರೆಗಳು ಇಂದಿನ ಪೀಳಿಗೆಗೆ ತಲುಪಬೇಕು. ವಿಚಾರ ಕ್ರಾಂತಿಯ ಮೂಲಕ ಸಮಾಜ ಪರಿವರ್ತನೆಗೊಳಿಸಬೇಕಿದೆ ಎಂದು ಹೇಳಿದರು. ವಚನ ಸಾಹಿತ್ಯದ ಮಹತ್ವವನ್ನು ಎಲ್ಲೆಡೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವವರನ್ನು ಅಖಿಲ ಭಾರತೀಯ ಶರಣ ಸಾಹಿತ್ಯ ಪರಿಷತ್ತು ಗುರುತಿಸಿ ಗೌರವಿಸಬೇಕಿದೆ. ಡಾ..ಗು.ಹಳಹಟ್ಟಿಯವರು ವಚನ ಸಾಹಿತ್ಯವನ್ನು ಸಂಗ್ರಹಿಸಿ ಎಲ್ಲೆಡೆ ಪ್ರಚುರ ಮಾಡಲು ಹಾಗೂ ಕರ್ನಾಟಕವನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯಲು ಸಾಕಷ್ಟು ಶ್ರಮಿಸಿದ್ದಾರೆ. ವಚನ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ ಎಂದರು.
ಅಖಿಲ ಭಾರತೀಯ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಪ್ಪರಾವ್ ಅಕ್ಕೋಣೆ ಮಾತನಾಡಿ, ಇಡೀ ಜಗತ್ತಿಗೆ ಕಾಯಕದ ಮಹತ್ವವನ್ನು ಸಾರಿದವರು ಬಸವಣ್ಣನವರು. ವಚನ ಸಾಹಿತ್ಯವನ್ನು ಸಂರಕ್ಷಿಸುವುದರಲ್ಲಿ ಡಾ..ಗು.ಹಳಹಟ್ಟಿ ಅವರ ಪಾತ್ರ ಮಹತ್ತರವಾದ್ದದ್ದು ಎಂದು ಹೇಳಿದರು.
ಪ್ರೊ.ಎಂ.ಬಿ.ಶಿವಾನಂದ ಮಾತನಾಡಿ, ಸಮಾಜದಲ್ಲಿ ಇಂದು ಹಣಗಳಿಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಸಾಹಿತ್ಯ ಆಸಕ್ತಿಗಳು ಯುವಪೀಳಿಗೆಯವರಲ್ಲಿ ಕಡಿಮೆಯಾಗುತ್ತಿದೆ. ನಾವು ನಮ್ಮ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರ, ವಚನಕಾರರ ಬಗ್ಗೆ ಮಾಹಿತಿಗಳನ್ನು ತಿಳಿಸಿ ಅವರನ್ನು ಗೌರವಿಸುವ ಸಂಸ್ಕಾರವನ್ನು ಬೆಳಸಬೇಕಿದೆ. ನಿರ್ಗುಣವನ್ನ ಬಿಟ್ಟು ಸುಗುಣಗಳನ್ನು ಅಳವಡಿಸಿಕೊಂಡವರಲ್ಲಿ ಡಾ..ಗು.ಹಳಹಟ್ಟಿ ಕೂಡ ಒಬ್ಬರು. ಕನ್ನಡ ನಾಡಿನ ಯಶಸ್ಸಿಗಾಗಿ ಶ್ರಮಿಸಿದ ಅವರು ಎಲ್ಲರಿಗೂ ಸ್ಪೂರ್ತಿ ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮೃತ್ಯುಂಜಯ ಎಸ್.ಕೆಂಡದಮಠ, ಬೆಂಗಳೂರು ನಗರ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.