ಟೀಕೆ-ಟಿಪ್ಪಣಿಗೆ ಪತ್ರಕರ್ತರು ಪರಿಹಾರವನ್ನು ಕಲ್ಪಿಸಬೇಕು: ಸಿದ್ದರಾಮಯ್ಯ
ಬೆಂಗಳೂರು, ಜು.7: ಪತ್ರಕರ್ತರು ಟೀಕೆ- ಟಿಪ್ಪಣಿ ಮಾಡಿ ಅಷ್ಟಕ್ಕೆ ನಿಲ್ಲಿಸಬಾರದು. ಅದಕ್ಕೆ ಸೂಕ್ತ ಪರಿಹಾರಗಳನ್ನೂ ನೀಡಬೇಕು. ಇಲ್ಲವಾದರೆ ಯಾರಿಗೂ ಪ್ರಯೋಜನ ಆಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ರವಿವಾರ ನಗರದ ವಾಸವಿ ವಿದ್ಯಾನಿಕೇತನ್ ಸಭಾಂಗಣದಲ್ಲಿ ಹಿರಿಯ ಪತ್ರಕರ್ತ ಶೈಲೇಶಚಂದ್ರ ಆಪ್ತ ಬಳಗ ಆಯೋಜಿಸಿದ್ದ ‘ಶೈಲೇಶಚಂದ್ರ ಗುಪ್ತ 75, ಪತ್ರಿಕೋದ್ಯಮದಲ್ಲಿ 50 ವರ್ಷ’ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪತ್ರಿಕೋದ್ಯಮ ಸಮಾಜದ ಕಾವಲು ನಾಯಿಯಂತೆ, ಯಾವೊತ್ತು ಪತ್ರಕರ್ತರು ವಿಕೃತ ಮನಸ್ಸಿನಿಂದ ಇರಬಾರದು. ಸಮಸ್ಯೆಗೆ ಪರಿಹಾರ ಹೇಳದೆ ಬರೀ ಟೀಕೆ- ಟಿಪ್ಪಣಿಯನ್ನೇ ಮಾಡಿದರೆ ಹೇಳಿದವರಿಗೂ ಪ್ರಯೋಜನವಿಲ್ಲ. ಸಮಾಜಕ್ಕೂ ಪ್ರಯೋಜನವಿಲ್ಲ. ಪತ್ರಿಕೋದ್ಯಮ ಅಂದರೆ ವೈಯಕ್ತಿಕವಾಗಿ ಟೀಕೆ ಮಾಡುವುದಲ್ಲ ಎಂದು ಹೇಳಿದರು.
ಮಾಧ್ಯಮಗಳು ರಂಜನೆಯ ವಿಚಾರಗಳನ್ನು ಮಾತ್ರ ಪ್ರಚಾರ ಮಾಡುವುದಲ್ಲ. ಸಮಾಜಕ್ಕೆ ಏನು ಅನುಕೂಲವಾಗುತ್ತದೋ ಅಂತಹ ವಿಚಾರಗಳ ಪ್ರಸ್ತುತ ಪಡಿಸಬೇಕು. ಅಂತಹ ವಿಚಾರಗಳನ್ನು ಜನರ ಮುಂದೆ ಇಡುವಂತಹ ಕಾರ್ಯ ನಡೆಯಬೇಕು. ಸಾರ್ವಜನಿಕರ ಅಭಿಪ್ರಾಯವನ್ನು ರೂಪಿಸಬೇಕು. ಅದು ನಿಜವಾದ ಪತ್ರಿಕೋದ್ಯಮ. ಅಂತಹ ಪತ್ರಿಕೋದ್ಯಮ ಇಂದು ವಿರಳವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇತ್ತೀಚೆಗೆ ಪತ್ರಿಕೋದ್ಯಮಕ್ಕೆ ಸಮಾಜದ ಬಗ್ಗೆ ಹೆಚ್ಚು ಕಾಳಜಿಯಿಲ್ಲ. ಗಂಡ, ಹೆಂಡತಿಯರ ವೈಯಕ್ತಿಕ ಬದುಕಿನಂತಹ ವಿಚಾರಗಳನ್ನು ಮಾಧ್ಯಮಗಳಲ್ಲಿ ಬಿತ್ತರಿಸುವುದಾಗಲಿ, ಬರೆಯುವುದಾಗಲಿ ಎಷ್ಟು ಸರಿ. ಇದರಿಂದ ಯಾರಿಗೂ ಪ್ರಯೋಜನವಿಲ್ಲ. ಸಮಾಜ ತಿದ್ದುವಲ್ಲಿ ಶೈಲೇಶ ಚಂದ್ರರಂತಹ ಹಿರಿಯ ಪತ್ರಕರ್ತರನ್ನು ಅನುಸರಿಸುವುದು ಅವಶ್ಯಕ ಎಂದರು.
ಮನಸ್ಸು ಶುದ್ಧವಾಗಿದ್ದರೆ ಆಯುಷ್ಯ ವೃದ್ಧಿಯಾಗುತ್ತಲೇ ಇರುತ್ತದೆ. ಬದುಕಿದ್ದಷ್ಟು ದಿನ ಸಾರ್ಥಕ ಜೀವನ ನಡೆಸಬೇಕು. ಸಮಾಜಕ್ಕೆ ಕೊಡುಗೆ ನೀಡಬೇಕು. ಶೈಲೇಶಚಂದ್ರರವರು ಹೆಸರಿಗೆ ತಕ್ಕಂತೆ ಸಾಧನೆ ಮಾಡಿದ್ದಾರೆ. ಅವರ ತಂದೆ ತಾಯಿಗಳು ಅವರಿಗೆ ಸಾರ್ಥಕ ಹೆಸರಿಟ್ಟಿದ್ದಾರೆ. ಶೈಲೇಶ್ ಅವರ ಬದುಕು, ಹೆಸರು ಎರಡು ಸಾರ್ಥಕವಾಗಿದೆ. ಇಂತಹ ಸಾಧನೆಗಾಗಿಯೇ ಅವರಿಗೆ ಅಂತಹ ಹೆಸರಿಡಲಾಯಿತೆ ಎಂದೊಮ್ಮೆ ಅನ್ನಿಸುತ್ತಿದೆ ಎಂದರು.
ಪ್ರತಿಯೊಬ್ಬ ಪುರುಷನ ಯಶಸ್ವಿನ ಹಿಂದೆ ಮಹಿಳೆ ಕೊಡುಗೆ ಇದೆ. ಬಹಳ ವರ್ಷಗಳಿಂದ ನನಗೆ ಶೈಲೇಶ್ ಅವರೊಂದಿಗೆ ಒಡನಾಟವಿದೆ. ಪತ್ರಿಕೋದ್ಯಮದಲ್ಲಿ 50 ವರ್ಷಗಳ ಯಶಸ್ವಿ ಸೇವೆ ಸಲ್ಲಿಸಿದ್ದಾರೆ. ಬಜೆಟ್ ಚರ್ಚೆಯಲ್ಲಿಯೂ ಭಾಗಿಯಾಗಿದ್ದಾರೆ. ಅಲ್ಲದೆ, ಬಜೆಟ್ನ ನ್ಯೂನತೆಗಳನ್ನು ಕುರಿತು ಮಾಹಿತಿ ನೀಡಿದ್ದಾರೆ. ಯಾವುದೇ ವಿಚಾರಗಳನ್ನು ವಸ್ತು ಪ್ರವೃತ್ತಿಯ ಹಿನ್ನೆಲೆ ಆಧರಿಸಿ ಮಾತನಾಡುವ ಸಾಮರ್ಥ್ಯ ಶೈಲೇಶ ಅವರಿಗೆ ಇತ್ತು ಎಂದು ತಿಳಿಸಿದರು.
ಅವರು ನನ್ನ ಬಗ್ಗೆ ಸತ್ಯ ಹೇಳುತ್ತಾರೆ, ಆದರೆ ಕೆಲವರಿಗೆ ಅದು ಇಷ್ಟವಿಲ್ಲ. ಪತ್ರಿಕೋದ್ಯಮದಲ್ಲಿ ದೊಡ್ಡ ಹೆಸರು ಮಾಡಿರುವ ಶೈಲೇಶಚಂದ್ರ, ದೇಶದ ಅರ್ಥ ವ್ಯವಸ್ಥೆಯ ವಿಶ್ಲೇಷಣೆಯನ್ನು ಜನಸಾಮಾನ್ಯರಿಗೂ ಅರ್ಥ ಮಾಡಿಕೊಳ್ಳುವಂತೆ ವಿವರಿಸುತ್ತಿದ್ದರು. ಸಾಮಾಜಿಕ ಸಮಸ್ಯೆಗಳ ಆಳ ಅರಿವಿದ್ದರೆ ಮಾತ್ರ ಇಂತಹ ವಿಶ್ಲೇಷಣೆ ಸಾಧ್ಯ. ಇಂತಹ ವಿಶ್ಲೇಷಣೆಯಿಂದ ಸಮಸ್ಯೆ ನಿವಾರಣೆಯೂ ಸಾಧ್ಯವಾಗಲಿದೆ ಎಂದು ನುಡಿದರು.
ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಮಾತನಾಡಿ, ಶೈಲೇಶಚಂದ್ರ ಗುಪ್ತರ ಆರ್ಥಿಕ ವಿಚಾರಗಳ ಲೇಖನಗಳನ್ನು ಓದಿ ನಾನು ರೋಮಾಂಚನಗೊಂಡಿದ್ದೆ. ಅವರು ಶೈಕ್ಷಣಿಕವಾಗಿ ಓದಿದ್ದ ವಿಷಯವೇ ಬೇರೆ, ಅಂತಹದರಲ್ಲಿ ಸಾಮಾನ್ಯ ಜನರಿಗೂ ಆರ್ಥಿಕ ವಿಚಾರದ ಅರಿವು, ಪ್ರಜ್ಞೆಯನ್ನು ತಿಳಿಸುವ ಅವರ ಅರ್ಥಶಾಸ್ತ್ರದ ಲೇಖನಗಳು ಬಹಳ ಇಷ್ಟವಾಗುತ್ತಿದ್ದವು ಎಂದು ಹೇಳಿದರು.
ಇಡೀ ವಿಶ್ವದ ಆರ್ಥಿಕ ವ್ಯವಸ್ಥೆಯ ಬಗ್ಗೆ ವಿಶ್ಲೇಷಣೆ ಮಾಡುವಲ್ಲಿ ಶೈಲೇಶರು ನಿಪುಣರಾಗಿದ್ದರು. ಅವರ ಅರ್ಥಶಾಸ್ತ್ರದ ಹೊಸ ಕಲ್ಪನೆ ಹಾಗೂ ಹೊಸ ಪದದ ಬಗೆಗೆ ವಿವಿಧ ಚರ್ಚೆಗಳು ನಡೆದಿವೆ. ಅಲ್ಲದೆ, ಶೈಲೇಶರ ಅರ್ಥಶಾಸ್ತ್ರದ ಲೇಖನಗಳು ಸಮಗ್ರವಾದ ಪುಸ್ತಕವಾಗಬೇಕು. ಅರ್ಥಶಾಸ್ತ್ರದ ಹೊಸ ಪದ ಗುಚ್ಛವನ್ನು ಎಲ್ಲರಿಗೂ ತಿಳಿಸಬೇಕು ಎಂದು ಅವರು ಸಲಹೆ ನೀಡಿದರು.
ಸಮಾರಂಭದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು, ವಿಧಾನ ಪರಿಷತ್ ಮಾಜಿ ಅಧ್ಯಕ್ಷ ಡಿ.ಎಚ್.ಶಂಕರಮೂರ್ತಿ, ರಾಜ್ಯ ಸ್ಕೌಟ್ಸ್ ಅಂಡ್ ಗೈಡ್ಸ್ ಕಮೀಷನರ್ ಪಿ.ಜಿ.ಆರ್.ಸಿಂಧ್ಯಾ ಹಾಗೂ ನಿವೃತ್ತ ನ್ಯಾ.ಕೆ.ವಿ.ವಾಸುದೇವ ಮೂರ್ತಿ ಉಪಸ್ಥಿತರಿದ್ದರು.