ರಾಜೀನಾಮೆ ನೀಡಿದ ಶಾಸಕರ ವಿರುದ್ಧ 30ಕ್ಕೂ ಹೆಚ್ಚು ದೂರುಗಳು ಸಲ್ಲಿಕೆ
ಬೆಂಗಳೂರು,ಜು.8: ಮೈತ್ರಿ ಸರಕಾರದ ವಿರುದ್ದ ರಾಜೀನಾಮೆ ನೀಡಿ ಬಹಿರಂಗ ಬಂಡಾಯ ಸಾರಿರುವ ಅತೃಪ್ತ ಶಾಸಕರ ವಿರುದ್ಧ ಸ್ಪೀಕರ್ ಕಚೇರಿಗೆ 30 ಕ್ಕೂ ಹೆಚ್ಚು ದೂರುಗಳು ಸಲ್ಲಿಕೆಯಾಗಿವೆ.
ಕಾಂಗ್ರೆಸ್ ಕಾನೂನು ಘಟಕ ಸೇರಿದಂತೆ ವಿವಿಧ ಸಂಘಟನೆಗಳು, ರಾಜೀನಾಮೆ ನೀಡಿರುವ ಶಾಸಕರ ಕ್ಷೇತ್ರಗಳ ಜನರಿಂದ ದೂರು, ಮನವಿಗಳು ಸಲ್ಲಿಕೆಯಾಗಿವೆ. ಶಾಸಕರ ರಾಜೀನಾಮೆಯನ್ನು ಯಾವುದೆ ಕಾರಣಕ್ಕೂ ಅಂಗೀಕರಿಸದಂತೆ ಸಂಘಟನೆಗಳು ಮನವಿ ಮಾಡಿದ್ದು, ರಾಜೀನಾಮೆ ಅಂಗೀಕರಿಸುವುದಾದರೆ ತಮ್ಮ ದೂರುಗಳ ಪರಿಶೀಲನೆ ನಡೆಸಿ ತಮ್ಮ ಅಹವಾಲು ಕೇಳಬೇಕು ಎಂದು ಒತ್ತಾಯ ಮಾಡಿವೆ.
ನಾವು ಶಾಸಕರನ್ನು 5 ವರ್ಷಗಳ ಅವಧಿಗೆ ಆಯ್ಕೆ ಮಾಡಿದ್ದೇವೆ. ಅವರು ಹಣದ ಆಮಿಷಕ್ಕೊಳಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೂಲಂಕಷ ವಿವರಣೆ ಪಡೆದು ಶಾಸಕರ ವಿಚಾರಣೆ ನಡೆಸಬೇಕು. ತಮಗೂ ದಿನಾಂಕ ನಿಗದಿಪಡಿಸಿ ಅಹವಾಲು ಹೇಳಲು ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಯುವ ಘಟಕ, ಹುಣಸೂರಿನ ವಿವಿಧ ಸಂಘಟನೆಗಳು, ಸಾರ್ವಜನಿಕರು, ಸಾಮಾಜಿಕ ಕಾರ್ಯಕರ್ತರಿಂದ ದೂರುಗಳ ಸಲ್ಲಿಕೆ ಆಗಿದೆ ಎಂದು ಸ್ಪೀಕರ್ ಕಚೇರಿ ಮೂಲಗಳ ಮಾಹಿತಿ ನೀಡಿವೆ.