ರಾಜೀನಾಮೆ ನೀಡಿದ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಸ್ಪೀಕರ್ ಗೆ ದೊರೆಸ್ವಾಮಿ, ದೇವನೂರು ದೂರು
ಅಗತ್ಯಬಿದ್ದರೆ ಕೋರ್ಟ್ ಮೆಟ್ಟಿಲೇರುವುದಾಗಿ ಎಚ್ಚರಿಕೆ
ಬೆಂಗಳೂರು, ಜು.15: ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದರಂತೆ ರಾಜಕೀಯ ಹೈಡ್ರಾಮ ನಡೆಯುತ್ತಿರುವ ನಡುವೆ ‘ಸ್ವಹಿತಾಸಕ್ತಿಗಾಗಿ ರಾಜೀನಾಮೆ ನೀಡುತ್ತಿರುವ ಅತೃಪ್ತ ಶಾಸಕರ’ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಮತ್ತು ಖ್ಯಾತ ಚಿಂತಕ ದೇವನೂರ ಮಹಾದೇವ ಅವರು ಸ್ಪೀಕರ್ ಗೆ ಪತ್ರ ಬರೆದಿದ್ದಾರೆ.
“ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಆಘಾತಕಾರಿಯಾಗಿವೆ. ಅನೈತಿಕ ಪಕ್ಷಾಂತರಗಳನ್ನು ತಡೆಯುವ ಉದ್ದೇಶದಿಂದ ಪಕ್ಷಾಂತರ ನಿಷೇಧ ಕಾಯ್ದೆ 1985ರಲ್ಲಿ ಜಾರಿಗೆ ಬಂದಿದ್ದು, 2003ರಲ್ಲಿ ಅದಕ್ಕೆ ತಿದ್ದುಪಡಿ ಮಾಡಲಾಗಿದೆ. ಇದೀಗ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಂದು ಪಕ್ಷದಿಂದ ಹೆಚ್ಚಿನ ಅಧಿಕಾರದೊಂದಿಗೆ ಸ್ಪರ್ಧಿಸುವ ಪ್ರಕ್ರಿಯೆಗೆ ಮುಂದಾಗಿದ್ದಾರೆ. ಆಮಿಷ, ಒತ್ತಡ ಅಥವಾ ಇನ್ಯಾವುದೋ ಕಾರಣಕ್ಕೆ ಸ್ವಹಿತಾಸಕ್ತಿಗಾಗಿ ಪಕ್ಷ ಬದಲಿಸುತ್ತಿರುವವರು ತಮ್ಮ ಆತ್ಮವನ್ನೂ, ಮತ ನೀಡಿದ ಮತದಾರರನ್ನೂ ಮಾಡಿಕೊಂಡಂತೆ. ಮತದಾರರು ಅಭ್ಯರ್ಥಿಗೆ ಮಾತ್ರವಲ್ಲ, ಪಕ್ಷಕ್ಕೂ ಮತ ನೀಡಿರುತ್ತಾರೆ. ಈಗ ನಡೆಯುತ್ತಿರುವುದು ಹೊಣೆಗೇಡಿತನ ಮಾತ್ರವಲ್ಲ, ದ್ರೋಹವೂ ಹೌದು. ರಾಜೀನಾಮೆ ನೀಡಿದವರು 6 ವರ್ಷಗಳ ಕಾಲ ಯಾವುದೇ ಚುನಾವಣೆಗೆ ನಿಲ್ಲಬಾರದು, ಯಾವ ಅಧಿಕಾರ ಸ್ಥಾನಗಳನ್ನೂ ಹೊಂದಬಾರದು ಎಂಬ ನಿಯಮವೂ ಜಾರಿಯಾಗಬೇಕಾಗಿದೆ. ಅಗತ್ಯಬಿದ್ದರೆ ಉನ್ನತ ನ್ಯಾಯಾಲಗಳಿಗೂ ಹೋಗಲು ಮುಂದಾಗಿದ್ದೇವೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ದೇವನೂರ ಮಹಾದೇವ ಮತ್ತು ಎಚ್.ಎಸ್. ದೊರೆಸ್ವಾಮಿಯವರು ಬರೆದ ಪತ್ರದ ಪ್ರತಿ ಈ ಕೆಳಗಿದೆ.