ರಾಮಲಿಂಗಾರೆಡ್ಡಿಯಂತೆ ರಾಜೀನಾಮೆ ಹಿಂಪಡೆಯುವ ಮಾತೇ ಇಲ್ಲ: ಎಸ್.ಟಿ.ಸೋಮಶೇಖರ್
ಬೆಂಗಳೂರು, ಜು.18: ನಾವು ಯಾವುದೇ ಒತ್ತಡಕ್ಕೂ ಮಣಿಯದೆ ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಹಿಂಪಡೆಯುವುದಿಲ್ಲವೆಂದು ಕಾಂಗ್ರೆಸ್ನ ಅತೃಪ್ತ ಶಾಸಕ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಗುರುವಾರ ವಿಧಾನಸಭೆಯ ಕಲಾಪ ಆರಂಭವಾಗುವುದಕ್ಕೆ ಸ್ವಲಹೊತ್ತು ಇರುವಾಗಲೆ ವಿಡಿಯೊವನ್ನು ಬಿಡುಗಡೆ ಮಾಡಿದ ಅವರು, ಕಾಂಗ್ರೆಸ್ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ತಮ್ಮ ರಾಜೀನಾಮೆಯನ್ನು ಹಿಂಪಡೆಯುತ್ತೇನೆಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಆದರೆ, ಮುಂಬೈನಲ್ಲಿರುವ ನಾವ್ಯಾರು ರಾಜೀನಾಮೆಯನ್ನು ಹಿಂಪಡೆಯುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಮುನಿರತ್ನ, ಬೈರತಿ ಬಸವರಾಜ್, ರಾಮಲಿಂಗಾರೆಡ್ಡಿ ಹಾಗೂ ನಾನು ಒಟ್ಟಾಗಿ ರಾಜೀನಾಮೆ ಕೊಟ್ಟಿದ್ದೆವು. ಒಮ್ಮೆ ರಾಜೀನಾಮೆ ನೀಡಿದ ಬಳಿಕ ಮತ್ತೆ ವಾಪಾಸು ಪಡೆಯಬಾರದು ಎಂದು ನಾವು ಒಟ್ಟಾಗಿ ಕುಳಿತು ಮಾತನಾಡಿಕೊಂಡಿದ್ದೆವು. ಆದರೆ, ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಾಸು ಪಡೆಯುವುದಾಗಿ ಹೇಳಿದ್ದಾರೆ. ಅವರ ಹಾದಿಯನ್ನು ನಾವು ಅನುಸರಿಸುವುದಿಲ್ಲವೆಂದು ಅವರು ಹೇಳಿದ್ದಾರೆ.