"ನಮ್ಮನ್ನು ಬಂಧನದಲ್ಲಿರಿಸಲಾಗಿದೆ, ಬಂದು ಕರೆದುಕೊಂಡು ಹೋಗಿ ಎಂದು ಹೇಳಿದ್ದರು"
ಮುಂಬೈಯಲ್ಲಿರುವ ಶಾಸಕರ ಬಗ್ಗೆ ಡಿ.ಕೆ.ಶಿವಕುಮಾರ್
ಫೈಲ್ ಚಿತ್ರ
ಬೆಂಗಳೂರು, ಜು.19: ಮುಂಬೈಯಲ್ಲಿರುವ ಶಾಸಕರ ಮೂಲಕ ನಮಗೆ ಕರೆ ಬಂತು, ನಾವು ಬರಲು ಸಿದ್ಧರಿದ್ದೇವೆ. ನಮ್ಮನ್ನು ಬಂಧನದಲ್ಲಿರಿಸಲಾಗಿದೆ. ಮುಖ್ಯಮಂತ್ರಿ, ಸಿಎಲ್ಪಿ ನಾಯಕರು ಹಾಗೂ ನೀವು ಬಂದು ನಮ್ಮನ್ನು ಕರೆದುಕೊಂಡು ಹೋಗಿ ಎಂದರು. ಈ ಹಿನ್ನೆಲೆಯಲ್ಲಿ ನಾವು ಅಲ್ಲಿಗೆ ಹೋಗಿದ್ದೆವು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ಶುಕ್ರವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಅಲ್ಲಿಗೆ ಬರುವುದು ಬೇಡ ಎಂದು ತಿಳಿಸಿ, ನಾನು, ಸಚಿವ ಜಿ.ಟಿ.ದೇವೇಗೌಡ ಹಾಗೂ ಇಬ್ಬರು ಶಾಸಕರು ಅಲ್ಲಿಗೆ ಅಧಿಕೃತ ಕಾರ್ಯಕ್ರಮ ಹಾಕಿಕೊಂಡು, ಹೊಟೇಲ್ ಕೊಠಡಿ ಕಾಯ್ದಿರಿಸಿಕೊಂಡು ಹೋದೆವು. ಆದರೆ, ನಮ್ಮನ್ನು ಅಲ್ಲಿ ಹೊಟೇಲ್ ಒಳಗೆ ಹೋಗಲು ಅವಕಾಶ ನೀಡಲಿಲ್ಲ ಎಂದರು.
ಅಲ್ಲಿರುವ ಎಲ್ಲ ಶಾಸಕರು ಒಂದೊಂದು ಹೇಳಿಕೆಯನ್ನು ನೀಡಬೇಕಾದರೂ ಅವರ ಹಣೆಗೆ ಗನ್ ಪಾಯಿಂಟ್ ಇಡಲಾಗುತ್ತಿದೆ ಎಂದು ಶಿವಕುಮಾರ್ ಆರೋಪಿಸುತ್ತಿದ್ದಂತೆ, ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಗದ್ದಲವೆಬ್ಬಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನನ್ನನ್ನು ತಡೆಯಲು ನಿಮ್ಮಿಂದ ಸಾಧ್ಯವಿಲ್ಲ. ನಾನು ನನ್ನ ಅಭಿಪ್ರಾಯವನ್ನು ಸ್ಪೀಕರ್ ಪೀಠಕ್ಕೆ ತಿಳಿಸುತ್ತಿದ್ದೇನೆ ಎಂದು ತಿರುಗೇಟು ನೀಡಿದರು.
ನಮ್ಮ ಜೊತೆ 30-40 ವರ್ಷ ಅವರು(ಅತೃಪ್ತ ಶಾಸಕರು) ರಾಜಕಾರಣ ಮಾಡಿದ್ದಾರೆ. ಇಲ್ಲಿ ಯಾರು ಶಾಶ್ವತವಲ್ಲ. ಅವರ ಕುಟುಂಬದವರು, ಕ್ಷೇತ್ರದವರು ನಮ್ಮ ಬಳಿ ಬಂದು ಅವಲತ್ತುಕೊಳ್ಳುತ್ತಿದ್ದಾರೆ. ಇವತ್ತಲ್ಲ ನಾಳೆ ಆ ಎಲ್ಲ ವಿಷಯಗಳು ಬಹಿರಂಗವಾಗುತ್ತವೆ ಎಂದು ಶಿವಕುಮಾರ್ ಹೇಳಿದರು.
ಈ ಸಂಬಂಧ ಪ್ರತಿಕ್ರಿಯಿಸಿದ ಸ್ಪೀಕರ್ ರಮೇಶ್ ಕುಮಾರ್, ಸದನದ ಹೊರಗೆ ಎಲ್ಲೋ ಏನೋ ಆಗಿರುವುದನ್ನು ನಾನು ಒಪ್ಪಲು ಸಾಧ್ಯವಿಲ್ಲ. ಈ ಸದನದ ಸದಸ್ಯರ ಪೈಕಿ ಯಾರಾದರೂ ನನಗೆ ಅವರಿಗೆ ಆಪತ್ತು ಇರುವ ಕುರಿತು ಸಂದೇಶ ಕೊಟ್ಟಿದ್ದರೆ, ಅವರ ಅವರ ಕುಟುಂಬ ಸದಸ್ಯರು, ರಕ್ತ ಸಂಬಂಧಿಗಳು ಈ ಬಗ್ಗೆ ಮಾಹಿತಿ ನೀಡಿದ್ದರೆ ನಾನು ಗೃಹ ಸಚಿವರನ್ನು ಕರೆದು ರಕ್ಷಣೆ ನೀಡುವಂತೆ ಸೂಚನೆ ನೀಡಬಹುದಿತ್ತು. ಆದರೆ, ಈ ವಿಚಾರದಲ್ಲಿ ನಾನು ಏನು ಮಾಡಲು ಸಾಧ್ಯವಿಲ್ಲ ಎಂದರು.