ಎಂ.ಟಿ.ಬಿ ಹೇಳಿಕೆ ಸತ್ಯಕ್ಕೆ ದೂರವಾದದ್ದು: ಬೆಂಗಳೂರು ಮಹಾನಗರ ಯುವ ಕಾಂಗ್ರೆಸ್
ಬೆಂಗಳೂರು, ಜು.21 : ಹಿರಿಯ ನಾಯಕ ಹಾಗೂ ಶಾಸಕ ರಾಮಲಿಂಗಾರೆಡ್ಡಿ ಅವರ ಬಗ್ಗೆ ಅತೃಪ್ತ ಶಾಸಕ ಎಂ.ಟಿ.ಬಿ.ನಾಗರಾಜ್ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾದುದುಎಂದು ಬೆಂಗಳೂರು ಮಹಾನಗರ ಯುವ ಕಾಂಗ್ರೆಸ್ ಆಕ್ಷೇಪಿಸಿದೆ.
ಶಾಸಕರಾಗಿ, ಸಚಿವರಾಗಿ ಅಧಿಕಾರ ಪಡೆದ ನೀವು ಪಕ್ಷದ ಹಿರಿಯರು ಹಾಗೂ ಕಾರ್ಯಕತರ ಮಾತಿಗೆ ನೀಡಿರುವ ಗೌರವ ಏನು. ಪಕ್ಷದ ಮುಖಂಡರ ಸಮ್ಮುಖದಲ್ಲಿಯೇ ರಾಜೀನಾಮೆ ಹಿಂಪಡೆಯುತ್ತೇನೆ ಎಂದು ಭರವಸೆ ನೀಡಿ, ಅನಂತರ ಕೈಕೊಟ್ಟು ಮುಂಬೈಗೆ ತೆರಳಿರುವ ನೀವು ನಿಮ್ಮ ಸ್ವಾರ್ಥಕ್ಕಾಗಿ ರಾಮಲಿಂಗಾರೆಡ್ಡಿ ಹೆಸರನ್ನು ಎಳೆದು ತರುವುದು ಸೂಕ್ತವಲ್ಲ ಎಂದು ತಿಳಿಸಿದೆ.
ರಾಮಲಿಂಗಾರೆಡ್ಡಿಯು ಪಕ್ಷದ ಕೆಲವು ವಿಚಾರಗಳಿಂದ ಬೇಸತ್ತು ರಾಜೀನಾಮೆ ನೀಡಿದ್ದರೆ ಹೊರತು ಸ್ವಾರ್ಥಕ್ಕಾಗಿ ಅಲ್ಲ. ಅವರು ಪಕ್ಷದ ಕಾರ್ಯಕರ್ತರ ಹಾಗೂ ಪಕ್ಷದ ನಾಯಕರ ವಿರುದ್ಧವಲ್ಲ. ಆದುದರಿಂದಲೇ ಹಿರಿಯರ ಮಾತಿಗೆ ಬೆಲೆ ನೀಡಿ ತಮ್ಮ ರಾಜೀನಾಮೆಯನ್ನು ವಾಪಸ್ಸು ಪಡೆದಿದ್ದಾರೆ. ನಿಮಗೆ ಪಕ್ಷದ ಬಗ್ಗೆ ಹಾಗೂ ಕಾರ್ಯಕರ್ತರ ಬಗ್ಗೆ ಗೌರವಿದ್ದರೆ ಸದನಕ್ಕೆ ಆಗಮಿಸಿ ಪಕ್ಷ ನಿಷ್ಠೆ ತೋರಿಸಿ ಎಂದು ಸಮಿತಿ ಆಗ್ರಹಿಸಿದೆ.