ಮಕ್ಕಳಾಗಲೆಂದು ಮಾತ್ರೆ ಸೇವಿಸಿದ್ದ ದಂಪತಿ: ಪತಿ ಮೃತ್ಯು, ಪತ್ನಿ ಅಸ್ವಸ್ಥ
ಬೆಂಗಳೂರು, ಜು.22: ಮಕ್ಕಳಾಗಲೆಂದು ಮಾತ್ರೆ ಸೇವಿಸಿದ್ದ ದಂಪತಿ ಪೈಕಿ ಪತಿ ಮೃತಪಟ್ಟರೆ, ಪತ್ನಿ ಅಸ್ವಸ್ಥಗೊಂಡಿರುವ ಘಟನೆ ನೆಲಮಂಗಲ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಇಲ್ಲಿನ ಅರಶಿಣಕುಂಟೆ ಗ್ರಾಮದ ನಿವಾಸಿ ಶಶಿಧರ್ ಸಾವನ್ನಪ್ಪಿದ್ದು, ಇವರ ಪತ್ನಿ ಗಂಗಮ್ಮ ತೀವ್ರ ಅಸ್ವಸ್ಥರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಮೃತ ಶಶಿಧರ್ ಅರಶಿಣಕುಂಟೆ ಗ್ರಾಮದಲ್ಲಿ ದಿನಸಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ದಂಪತಿಗೆ ಮದುವೆಯಾಗಿ 12 ವರ್ಷ ಕಳೆದಿದ್ದರೂ ಮಕ್ಕಳಾಗಲಿಲ್ಲ ಎಂಬ ಬೇಸರವಿತ್ತು. ಇತ್ತೀಚೆಗೆ ಬಿಹಾರ ಮೂಲದ ವ್ಯಕ್ತಿಯೊಬ್ಬ ಕಾರಿನಲ್ಲಿ ಜಾಹೀರಾತು ಮೂಲಕ ಮಕ್ಕಳಿಲ್ಲದವರಿಗೆ ಮಕ್ಕಳಾಗುವಂತೆ ಔಷಧಿ ನೀಡುವುದಾಗಿ ಹೇಳಿ, 25 ಸಾವಿರ ರೂ. ವಸೂಲಿ ಮಾಡಿದ್ದ ಎನ್ನಲಾಗಿದೆ.
ಇದನ್ನು ನಂಬಿದ ಶಶಿಧರ್ ದಂಪತಿ, ಎರಡು ಸಾವಿರ ಮುಂಗಡ ಹಣಕೊಟ್ಟು ಔಷಧಿ ಖರೀದಿಸಿದ್ದಾರೆ. ಔಷಧಿ ಫಲಿಸಿದರೆ ಉಳಿದ 23 ಸಾವಿರ ಹಣ ಕೊಡುವುದಾಗಿ ಹೇಳಿ ಜಾಹೀರಾತುದಾರರ ಮುಂದೆಯೇ ಇಬ್ಬರೂ ಔಷಧಿ (ಮಾತ್ರೆ) ಸೇವಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮಾತ್ರೆ ಸೇವಿಸಿದ 10 ನಿಮಿಷದಲ್ಲಿಯೇ ಇಬ್ಬರ ಆರೋಗ್ಯ ಏರುಪೇರು ಆಗಿದ್ದು, ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಬಳಿಕ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಶಶಿಧರ್ ಸಾವನ್ನಪ್ಪಿದ್ದು, ಗಂಗಮ್ಮ ತೀವ್ರ ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಘಟನೆ ಸಂಬಂಧ ನೆಲಮಂಗಲ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲು ಮಾಡಿದ್ದು, ತನಿಖೆ ಮುಂದುವರೆಸಲಾಗಿದೆ.