ಗಣೇಶ ಮೂರ್ತಿಗಳ ವಿಸರ್ಜನೆಗೆ ವಿಶೇಷ ಟ್ಯಾಂಕರ್
ಸಾಂದರ್ಭಿಕ ಚಿತ್ರ
ಬೆಂಗಳೂರು, ಆ.19: ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ವಿಶೇಷ ಟ್ಯಾಂಕ್ಗಳನ್ನು ತಯಾರಿಸಿದ್ದು, ಅದಕ್ಕಾಗಿ ಸ್ಮಾರ್ಟ್ ಆ್ಯಪ್ ಅನ್ನೂ ಸಿದ್ಧಪಡಿಸಲಾಗಿದೆ.
ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಜಿಪಿಎಸ್ ಆಧಾರಿತ ಸಂಚಾರಿ ಟ್ಯಾಂಕ್ಗಳನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ರೂಪಿಸಿದೆ. ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ 5 ಸಂಚಾರಿ ಟ್ಯಾಂಕ್ಗಳು ಕಾರ್ಯನಿರ್ವಹಿಸಲಿವೆ. ಈ ಟ್ಯಾಂಕ್ಗಳು ಮನೆಯ ಬಳಿ ಬರುವ ಮೊದಲೇ ಮೊಬೈಲ್ ಆ್ಯಪ್ನಿಂದ ಸಂದೇಶ ಪಡೆಯುವ ವ್ಯವಸ್ಥೆ ಮಾಡಲಾಗುತ್ತಿದೆ. ಟ್ಯಾಂಕ್ಗಳ ಸಂಖ್ಯೆಯನ್ನು ಹತ್ತಕ್ಕೇರಿಸುವ ಪ್ರಯತ್ನವೂ ನಡೆದಿದೆ.
ಸಂಚಾರಿ ಟ್ಯಾಂಕ್ ಮೆರವಣಿಗೆ: ಸಂಚಾರಿ ಟ್ಯಾಂಕ್ನ ಮುಂಭಾಗ ಮತ್ತೊಂದು ವಾಹನವಿರಲಿದ್ದು, ಅದರಲ್ಲಿ ಸಾಂಸ್ಕೃತಿಕ ತಂಡಗಳು ಪ್ರದರ್ಶನವಿರಲಿದೆ. ಟ್ಯಾಂಕ್ ಅನ್ನು ಸುಂದರವಾಗಿ ಪುಷ್ಪಗಳಿಂದ ಅಲಂಕರಿಸಲಾಗುತ್ತದೆ. ಗಣೇಶ ಹಬ್ಬದಿಂದ ಆರಂಭವಾಗಿ 6 ದಿನಗಳವರೆಗೆ ಮಧ್ಯಾಹ್ನ 3ರಿಂದ ರಾತ್ರಿ 10ರವರೆಗೆ ಟ್ಯಾಂಕ್ಗಳು ಸಂಚಾರ ನಡೆಸಲಿದೆ. ನಗರವನ್ನು 30 ಭಾಗಗಳಾಗಿ ಗುರುತಿಸಿ ಬೇಡಿಕೆ ಹೆಚ್ಚಿರುವಲ್ಲಿ ಟ್ಯಾಂಕರ್ಗಳ ಸೇವೆ ನೀಡಲಾಗುತ್ತದೆ. ಪೊಲೀಸ್ ಇಲಾಖೆಯು ನಕ್ಷೆ ಸಿದ್ಧಪಡಿಸಿಕೊಡಲಿದೆ.
ಆ್ಯಪ್ನಲ್ಲಿ ನೋಂದಣಿ: ಟ್ಯಾಂಕರ್ ಎಲ್ಲಿದೆ ಎಂದು ತಿಳಿಯಲು ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಹೆಸರು ಹಾಗೂ ವಿಳಾಸ ನೋಂದಾಯಿಸಬೇಕು. ಪ್ರತಿ ಟ್ಯಾಂಕ್ನಲ್ಲಿ ಜಿಪಿಎಸ್ ಅಳವಡಿಸಿದ್ದು, ಟ್ಯಾಂಕ್ ಎಲ್ಲಿದೆ ಎಂಬ ಮಾಹಿತಿ ಸಿಗುತ್ತದೆ.