ಎಸ್.ಮೂರ್ತಿ ಅಮಾನತು ವಿಚಾರ: ಉತ್ತರ ನೀಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರು, ಆ.19: ವಿಧಾನಸಭೆ ಕಾರ್ಯದರ್ಶಿ ಸ್ಥಾನದಿಂದ ಎಸ್.ಮೂರ್ತಿ ಅವರನ್ನು ಅಮಾನತು ಮಾಡಿರುವುದಕ್ಕೆ ಉತ್ತರ ನೀಡುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ.
ಅಮಾನತು ಆದೇಶ ಪ್ರಶ್ನಿಸಿ ಎಸ್.ಮೂರ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಮುಹಮ್ಮದ್ ನವಾಝ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಅವರು, ಸ್ಪೀಕರ್ಗೆ ನೇರವಾಗಿ ಅಮಾನತು ಮಾಡುವ ಅಧಿಕಾರವಿಲ್ಲ. ವಿಶೇಷ ಮಂಡಳಿ ಸಭೆ ಸೇರಿ ನಿರ್ಧಾರ ಮಾಡಬೇಕು. ಆದರೆ, ಇಲ್ಲಿ ಸ್ಪೀಕರ್ ಆದೇಶಿಸಿದ ನಂತರ ಮಂಡಳಿಯ ಇತರೆ ಸದಸ್ಯರು ಸಹಿ ಮಾಡಿದ್ದಾರೆ. ಮೊದಲೇ ಸಭೆ ನಡೆಸದೆ ಸ್ಪೀಕರ್ ಅಮಾನತು ಮಾಡಿ ಆದೇಶಿಸಿರುವುದು ಕಾನೂನು ಬಾಹಿರ ಎಂದು ಪೀಠಕ್ಕೆ ತಿಳಿಸಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ರಾಜ್ಯ ಸರಕಾರಕ್ಕೆ ಉತ್ತರ ನೀಡುವಂತೆ ಸೂಚಿಸಿ, ವಿಚಾರಣೆಯನ್ನು ಸೆ.4ಕ್ಕೆ ಮುಂದೂಡಿತು.
ಪ್ರಕರಣವೇನು: 2016-17ನೆ ಸಾಲಿನಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಅಧಿವೇಶನಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾದ ಕಾಮಗಾರಿಗಳಲ್ಲಿ ಹಾಗೂ ಇತರೆ ಖರ್ಚು ವೆಚ್ಚಗಳಲ್ಲಿ ಅವ್ಯವಹಾರ ನಡೆಸಲಾಗಿದೆ ಎಂದು ಆರೋಪದ ಹಿನ್ನೆಲೆಯಲ್ಲಿ ವಿಧಾನಸಭೆಯ ಸ್ಪೀಕರ್ ವಿಧಾನಸಭೆ ಸಚಿವಾಲಯದ ವಿಶೇಷ ಮಂಡಳಿಯ ಆದೇಶದ ಅನುಸಾರ ಎಸ್.ಮೂರ್ತಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ 2018ರ ಡಿ.27ರಂದು ಸಮ್ಮಿಶ್ರ ಸರಕಾರದ ಮಾಜಿ ಸ್ಪೀಕರ್ ರಮೇಶ್ಕುಮಾರ್ ಅಮಾನತು ಆದೇಶ ಹೊರಡಿಸಿದ್ದರು.