ದೇಶದ ಆರ್ಥಿಕ ದುಸ್ಥಿತಿಗೆ ಕೇಂದ್ರದ ಕೆಟ್ಟ ನೀತಿಗಳೇ ಕಾರಣ: ಉಗ್ರಪ್ಪ
ಬಳ್ಳಾರಿ, ಸೆ.1: ದೇಶದ ಆರ್ಥಿಕ ಪರಿಸ್ಥಿತಿ ತುಂಬಾ ಕಳವಳಕಾರಿಯಾಗಿದ್ದು, ಕೈಗಾರಿಕೋದ್ಯಮ ಮುಚ್ಚುತ್ತಿವೆ. ಪ್ರತಿದಿನ ಸಾವಿರಾರು ಉದ್ಯೋಗಗಳು ಕುಂಟಿತಗೊಳ್ಳುತ್ತಿವೆ. ಈ ದುಸ್ಥಿತಿಗೆ ಕೇಂದ್ರ ಸರಕಾರದ ಕೆಟ್ಟ ಆಡಳಿತ ನೀತಿಗಳೇ ಕಾರಣ ಎಂದು ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ ಕಿಡಿಕಾರಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಂದಾಲ್ ಕಂಪನಿಯಲ್ಲಿ ಶೇ.20 ರಷ್ಟು ಉತ್ಪಾದನೆ ಕಡಿಮೆಯಾಗಿದೆ. ಇರುವ ಉದ್ಯೋಗಗಳು ಕಡಿಮೆಯಾಗುತ್ತಿದ್ದಾರೆ. ಮತ್ತೊಂದೆಡೆ ಯುವಕರಿಗೆ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಆದರೆ, ಮಾತಿನಲ್ಲೇ ಮೋಡಿ ಮಾಡುವ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರಯಾಣದಲ್ಲಿ ಸಕ್ರಿಯರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಪ್ರವಾಹ ಇದೆ, ಬರಗಾಲವೂ ಇದೆ. ನೆರೆಯಿಂದ 88 ಸಾವನ್ನಪ್ಪಿದ್ದಾರೆ. 8-10 ಜನರು ನಾಪತ್ತೆಯಾಗಿದ್ದಾರೆ. ಲಕ್ಷಾಂತರ ಜಾನುವಾರು, ಕುರಿ, ಕೋಳಿ ನೀರು ಪಾಲಾಗಿದೆ. ಅಂದಾಜು ಒಂದು ಲಕ್ಷ ಕೋಟಿ ನಷ್ಟವಾಗಿದೆ. ನೆರೆ ಪರಿಹಾರಕ್ಕಾಗಿ ರಾಜ್ಯ ಸರಕಾರ ಕೇವಲ 374 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಲ್ಲಿ 203 ಕೋಟಿ ರೂಪಾಯಿ ಹಣವನ್ನು ಕೇಂದ್ರ ಸರಕಾರ ನೀಡಿದೆ. ರಾಜ್ಯದಲ್ಲಿ 25 ಸಂಸದರು ಹಾಗೂ ಕೇಂದ್ರದಲ್ಲಿ ಮೂವರು ಸಚಿವರಿದ್ದಾರೆ. ಆದರೆ, ರಾಜ್ಯದ ಬಗ್ಗೆ ಮಾತ್ರ ಪ್ರಧಾನಿ ನರೇಂದ್ರ ಮೋದಿ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದರು.
ನೆರೆ ಪರಿಸ್ಥಿತಿ ವೀಕ್ಷಿಸುವ ನೆಪದಲ್ಲಿ ಕೆಲ ಗಂಟೆಗಳ ಕಾಲ ರಾಜ್ಯಕ್ಕೆ ಪಿಕ್ನಿಕ್ಗೆ ಬಂದಿದ್ದ ಕೇಂದ್ರ ಗೃಹ ಸಚಿವರು ಹಾಗೂ ಹಣಕಾಸು ಸಚಿವರು, ಬೆಳಗಾವಿ ಕುಂದಾ ತಿಂದು ಹೋಗಿರಬೇಕು. ರಾಜ್ಯ ಬಿಜೆಪಿ ಮತ್ತು ಕೇಂದ್ರದ ನಾಯಕರ ಗುಂಪುಗಳ ನಡುವಿನ ಸಂಘರ್ಷದಿಂದ ಕೂಸು ಬಡವಾಯ್ತು ಎನ್ನುವ ಹಾಗೇ ಪ್ರವಾಹ ಪೀಡಿತ ಪ್ರದೇಶಗಳು ಬಡವಾಗುತ್ತಿವೆ ಎಂದು ಅವರು ದೂರಿದರು.
ರಾಜ್ಯ ಸರಕಾರ ಕುಂಭಕ್ರೋಣ ನಿದ್ರಾವ್ಯವಸ್ಥೆಯಲ್ಲಿದೆ. ಕೇಂದ್ರದ ಬಳಿ ಸರ್ವ ಪಕ್ಷ ನಿಯೋಗ ಕರೆದುಕೊಂಡು ಹೋಗಲಿ. ನಾವೇ ಪ್ರಧಾನಿ ಮೋದಿಯನ್ನ ಪ್ರಶ್ನೆ ಮಾಡುತ್ತೇವೆ. ವಿಶೇಷ ಅನುದಾನ ನೀಡಬೇಕು ಮತ್ತು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕೆಂದು ಕೇಳಿ ಕೊಳ್ಳುವುದಾಗಿ ಅವರು ತಿಳಿಸಿದರು.