'ದಂಡ ಇಳಿಕೆ' ಅಧಿಕೃತ ಆದೇಶ ಬಂದಿಲ್ಲ: ಪೊಲೀಸ್ ಆಯುಕ್ತ ಭಾಸ್ಕರ್ ರಾವ್
ಬೆಂಗಳೂರು, ಸೆ.14: ಸಂಚಾರ ನಿಯಮ ಉಲ್ಲಂಘಿಸುವವರಿಗೆ ವಿಧಿಸಲಾಗುವ ದಂಡದ ಮೊತ್ತದ ಪ್ರಮಾಣವನ್ನು ಕಡಿಮೆ ಮಾಡುವ ಸಂಬಂಧ ಸರಕಾರದಿಂದ ಯಾವುದೇ ಅಧಿಕೃತ ಆದೇಶ ಬಂದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸ್ಪಷ್ಟನೆ ನೀಡಿದರು.
ಶನಿವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೆ ಸಾರಿಗೆ ಇಲಾಖೆಯಿಂದ ಯಾವುದೇ ಅದೇಶ ಬಂದಿಲ್ಲ. ಸೆಪ್ಟೆಂಬರ್ ಮೊದಲನೇ ವಾರದಿಂದ ಹೊಸ ದಂಡ ನೀತಿ ಅಧಿಸೂಚನೆ ಬಂದಿದ್ದು, ಅದರ ಅನ್ವಯ ಸಂಚಾರ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ದಂಡ ಕಡಿಮೆ ಮಾಡುವ ಬಗ್ಗೆ ಹೊಸ ಅಧಿಸೂಚನೆ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಸರಕಾರ ಅಧಿಸೂಚನೆ ಹೊರಡಿಸಿದರೆ ಅದನ್ನು ಪಾಲಿಸುತ್ತೇವೆ. ಅಲ್ಲಿಯವರೆಗೂ ದಂಡ ವಸೂಲಿ ಮಾಡಲಾಗುತ್ತಿದೆ. ಅಲ್ಲದೆ, ಸಾರ್ವಜನಿಕರ ಜೊತೆ ಮಾನವೀಯತೆಯಿಂದ ವರ್ತಿಸಲು ಸೂಚನೆ ಬಂದಿದ್ದು, ಅದರಂತೆ ಸಿಬ್ಬಂದಿಗೆ ಸೂಚನೆ ಕೊಟ್ಟಿದ್ದೇವೆ ಎಂದು ಆಯುಕ್ತರು ತಿಳಿಸಿದರು.
Next Story