ಚಿತ್ರಕಲಾ ಪರಿಷತ್ ನಲ್ಲಿ ದಸರಾ ವಿಶೇಷ ಪ್ರದರ್ಶನ-ಮಾರಾಟ ಮೇಳ
ಬೆಂಗಳೂರು, ಸೆ.14: ಕರ್ನಾಟಕ ಚಿತ್ರಕಲಾ ಪರಿಷತ್ನ ಆವರಣದಲ್ಲಿ ದಸರಾ ಹಬ್ಬದ ಪ್ರಯುಕ್ತ ಆಯೋಜಿಸಿರುವ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಮಾಜಿ ಸಚಿವೆ ರಾಣಿ ಸತೀಶ್ ಚಾಲನೆ ನೀಡಿದರು.
ನಮ್ಮ ನಾಡ ಹಬ್ಬ ದಸರಾ ಆಚರಣೆಗೆ ಬೇಕಾದ ಬೊಂಬೆಗಳು, ಆಲಂಕಾರಿಕ ವಸ್ತುಗಳು ಮತ್ತು ದೇಶದ ಎಲ್ಲಾ ಭಾಗಗಳಿಂದ ಆಗಮಿಸಿರುವ ಕಲಾವಿದರ ಕಲಾಕೃತಿಗಳು ಒಂದೇ ವೇದಿಕೆಯ ಅಡಿಯಲ್ಲಿ ದೊರೆಯುವ ವ್ಯವಸ್ಥೆ ಮಾಡಿರುವುದು ಬಹಳ ಆಕರ್ಷಣೀಯ. ವಿವಿಧ ಶೈಲಿಯ ಸೀರೆಗಳು, ಆಲಂಕಾರಿಕ ವಸ್ತುಗಳು ಸೇರಿದಂತೆ ಕಲಾಕೃತಿಗಳು ಪ್ರದರ್ಶನಗೊಂಡಿರುವುದು ಬಹಳ ವಿಶೇಷವಾಗಿದೆ ಎಂದು ಹೇಳಿದರು.
ನಟಿ ಅದ್ವಿತ ಶೆಟ್ಟಿ ಮಾತನಾಡಿ, ಒಂದೇ ವೇದಿಕೆಯಡಿ ಎಲ್ಲಾ ರೀತಿಯ ಸಾಮಗ್ರಿಗಳು ದೊರೆಯುವ ವ್ಯವಸ್ಥೆಯನ್ನು ಅರ್ಬನ್ ಬಝಾರ್ ಮಾಡಿದೆ. ಇಂತಹ ಕಲಾಕೃತಿಗಳೂ ಹಾಗೂ ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಪ್ರದರ್ಶನಗಳು ಆಗಾಗ್ಗೆ ನಡೆಯುತ್ತಿರಬೇಕು. ಇಲ್ಲಿ ಪ್ರದರ್ಶನಕ್ಕೆ ಇಟ್ಟಿರುವ ದಸರಾ ಬೊಂಬೆಗಳ ಅಂದ ನೋಡಲು ಎರಡು ಕಣ್ಣು ಸಾಲದು ಎಂದು ಹೇಳಿದರು.
ಅರ್ಬನ್ ಬಝಾರ್ನ ವ್ಯವಸ್ಥಾಪಕರಾದ ಅಫ್ತಾಬ್ ಮಾತನಾಡಿ, ಪ್ರತಿಬಾರಿಯೂ ಹೊಸದನ್ನು ನೀಡುವ ದೃಷ್ಟಿಯಿಂದ ಕೆಲವೊಂದು ಗೊಂಬೆಗಳನ್ನು ಖರೀದಿಸುವುದು ನಡೆದು ಬಂದಿರುವ ಸಂಪ್ರದಾಯ. ಇಂತಹ ಸಂಪ್ರದಾಯಕ್ಕೆ ಪುಷ್ಟಿ ಕೊಡುವ ನಿಟ್ಟಿನಲ್ಲಿ ಹಾಗೂ ದಸರಾ ಹಬ್ಬಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಒಂದೇ ವೇದಿಕೆಯಡಿಯಲ್ಲಿ ಸಿಗುವ ರೀತಿಯಲ್ಲಿ ಮಾಡುವ ದೃಷ್ಟಿಯಿಂದ ಸೆ.22 ರವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ನಲ್ಲಿ ಡಿಸೈನ್ ಸ್ಟ್ರೋಮ್ಸ್, ಚಿತ್ತಾರ ಸಹಯೋಗದಲ್ಲಿ ಅರ್ಬನ್ ಬಝಾರ್ ಕರಕುಶಲ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಿದ್ದೇವೆ ಎಂದರು.
ಅರ್ಬನ್ ಬಝಾರ್ ಕರಕುಶಲ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ 100ಕ್ಕೂ ಹೆಚ್ಚು ಅಂಗಡಿಗಳಿದ್ದು ದೇಶದ ಎಲ್ಲಾ ಭಾಗಗಳಿಂದ ಆಗಮಿಸಿರುವ ಕಲಾವಿದರುಗಳು ತಮ್ಮ ಕಲೆಯನ್ನು ಪ್ರದರ್ಶನಕ್ಕೆ ಇಡಲಿದ್ದಾರೆ. ಮಣ್ಣು, ಕಲ್ಲು, ಮರ ಹಾಗೂ ಲೋಹಗಳನ್ನು ಬಳಸಿ ತಯಾರಿಸಿರುವ ಗೊಂಬೆಗಳು ಪ್ರಮುಖ ಆಕರ್ಷಣೆಯಾಗಿರಲಿವೆ ಎಂದು ಹೇಳಿದರು.