"ವಿಷ ಕುಡಿಯಬೇಕಾಗಿಲ್ಲ, ಶುಗರ್ ಸಮಸ್ಯೆ ಇರುವುದರಿಂದ ಸಕ್ಕರೆ ತಿಂದೇ ಸಾಯುತ್ತೇನೆ"
ಪಿಂಚಣಿಗೆ ಆಗ್ರಹಿಸಿ ಧರಣಿ ಕುಳಿತ ವೃದ್ಧ
ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ.16: ನಿವೃತ್ತಿಯಾದ ಬಳಿಕ ಬಿಬಿಎಂಪಿಯು ಪಿಂಚಣಿ ನೀಡದೇ ಸತಾಯಿಸುತ್ತಿರುವುದನ್ನು ವಿರೋಧಿಸಿ ನಿವೃತ್ತ ನೌಕರ ಎನ್.ಜಿ.ರೂಗಿ ಎಂಬುವವರು ನಗರದ ಪಾಲಿಕೆಯ ಎದುರು ಧರಣಿ ನಡೆಸುತ್ತಿದ್ದಾರೆ.
ಬಿಬಿಎಂಪಿಯ ಕೇಂದ್ರ ಕಚೇರಿಯ ಮುಂಭಾಗ ನ್ಯಾಯಕ್ಕಾಗಿ ಆಗ್ರಹಿಸಿ ಬೋರ್ಡ್ ಹಿಡಿದು ವೃದ್ಧರೊಬ್ಬರು ಧರಣಿ ನಡೆಸುತ್ತಿದ್ದಾರೆ. 'ಪಾಲಿಕೆ ಅಧಿಕಾರಿಗಳು ಪಿಂಚಣಿ ನೀಡಲು ಲಂಚ ಕೇಳುತ್ತಿದ್ದಾರೆ. ಅಷ್ಟು ಹಣ ನನ್ನ ಬಳಿಯಿಲ್ಲ, ಬದಲಿಗೆ ಸಾಯುವುದೇ ವಾಸಿ. ಹೀಗಾಗಿ, ನಾನು ಆತ್ಮಹತ್ಯೆ ಮಾಡಿಕೊಳ್ಳಲು ವಿಷ ಕುಡಿಯಬೇಕಾಗಿಲ್ಲ, ಶುಗರ್ ಸಮಸ್ಯೆ ಇರುವುದರಿಂದ ಸಕ್ಕರೆ ತಿಂದೇ ಸಾಯುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಚಿಕ್ಕಪೇಟೆ ಕಂದಾಯ ಕಚೇರಿಯಲ್ಲಿ ಕಂದಾಯ ಮೌಲ್ಯಮಾಪಕನಾಗಿ ಕೆಲಸ ನಿರ್ವಹಿಸುತ್ತಿದ್ದ ಎನ್.ಜಿ.ರೂಗಿ 2007 ರಲ್ಲೇ ನಿವೃತ್ತರಾಗಿದ್ದಾರೆ. ಆದರೆ ಸೇವೆಯಲ್ಲಿದ್ದಾಗ ಹಣ ದುರುಪಯೋಗದ ಆರೋಪ ಎದುರಿಸುತ್ತಿದ್ದರು. ಬಳಿಕ ಪ್ರಕರಣವನ್ನು ಕೋರ್ಟ್ ಇತ್ಯರ್ಥಗೊಳಿಸಿದ್ದರೂ, ಪಾಲಿಕೆ ಕಚೇರಿಯಿಂದ ಪಿಂಚಣಿ ದೊರೆಯುತ್ತಿಲ್ಲ ಎಂದು ಅವರು ಹೇಳಿದರು.
ಬಿಬಿಎಂಪಿ 2018 ರಿಂದ ಪಿಂಚಣಿ ನೀಡುತ್ತಿಲ್ಲ. ದಾಖಲೆ ಕೇಳಿ ಸತಾಯಿಸುತ್ತಿದ್ದಾರೆ. ಪ್ರತಿದಿನವೂ ಕಚೇರಿಗೆ ಬಂದರೆ ಯಾವುದೇ ಪ್ರಯೋಜನವಾಗುತ್ತಿಲ್ಲ. ದಾಖಲೆಗಳಿಲ್ಲ ಅಂತ ಅಲೆದಾಡಿಸುತ್ತಿದ್ದಾರೆ. ಕಚೇರಿಗಳಲ್ಲಿ ದಾಖಲೆ ಇಟ್ಟಿಕೊಳ್ಳಬೇಕಾಗಿದ್ದು, ಅವರ ಜವಾಬ್ದಾರಿ. ಆದರೂ ಇಟ್ಟಿಲ್ಲ. ಅಲ್ಲದೆ, ಪಾಲಿಕೆ ಅಧಿಕಾರಿಗಳು ಪಿಂಚಣಿ ನೀಡಲು 20 ಸಾವಿರ ಹಣ ಕೇಳುತ್ತಿದ್ದಾರೆ ಎಂದು ತಮ್ಮ ಅಸಹಾಯಕತೆಯನ್ನು ಹೊರಹಾಕಿದರು.