ರಾಜ್ಯದ ಮಠಗಳನ್ನು ಯಡಿಯೂರಪ್ಪ ಖರೀದಿಸಿದ್ದಾರೆ: ಎಚ್.ಎಸ್.ದೊರೆಸ್ವಾಮಿ
ರವೀಶ್ ಕುಮಾರ್ ಗೆ ಗೌರಿ ಪ್ರಶಸ್ತಿ ಪ್ರದಾನ
ಬೆಂಗಳೂರು, ಸೆ.22: ನಾಡಿನಲ್ಲಿರುವ ಲಿಂಗಾಯತ ಸಮುದಾಯದ ಮಠ ಮಾನ್ಯಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಂಡುಕೊಂಡಿದ್ದಾರೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಆಪಾದಿಸಿದರು.
ರವಿವಾರ ನಗರದ ಸೇಂಟ್ ಜೋಸೆಫ್ ಕಾಲೇಜಿನ ಸಭಾಂಗಣದಲ್ಲಿ ಗೌರಿ ಸ್ಮಾರಕ ಟ್ರಸ್ಟ್ ವತಿಯಿಂದ ಗೌರಿ ನೆನಪಿನ ದಿನ ಅಂಗವಾಗಿ ಏರ್ಪಡಿಸಿದ್ದ, ಗೌರಿ ಲಂಕೇಶ್ ರಾಷ್ಟ್ರೀಯ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮತ್ತು ಇಂಗ್ಲಿಷ್ ವೆಬ್ ಸೈಟ್ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಿಜೆಪಿ ಒಕ್ಕಲಿಗರ ಮೇಲೆ ಕಣ್ಣಿಟ್ಟಿದ್ದು, ಅವರ ನಾಶಕ್ಕೆ ಮುಂದಾಗಿದೆ. ಇತ್ತೀಚೆಗೆ ಒಕ್ಕಲಿಗ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದರು. ಆದರೆ, ಮುಖ್ಯ ವಿಷಯವನ್ನೇ ಮರೆಮಾಚಿದರು. ಇದು ಸರಿಯಲ್ಲ, ಮತ್ತೊಂದು ಹೋರಾಟಕ್ಕೆ ಮುಂದಾಗಬೇಕೆಂದು ಎಂದು ತಿಳಿಸಿದರು.
ಮುಸ್ಲಿಮ್ ಸಮುದಾಯದವರು ಮಸೀದಿಗಳಲ್ಲಿ ಸಭೆ ಮಾಡುವುದನ್ನು ಬಿಟ್ಟು ನಮ್ಮ ಜೊತೆ ಕೈಜೋಡಿಸಬೇಕು. ಆಗ ಮಾತ್ರ ಹೋರಾಟಕ್ಕೆ ಬಲತುಂಬಬಹುದು ಎಂದು ದೊರೆಸ್ವಾಮಿ ಹೇಳಿದರು.
ಸಮಾರಂಭದಲ್ಲಿ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಪತ್ರಕರ್ತ ಡಿ.ಉಮಾಪತಿ ಹಾಜರಿದ್ದರು.