ಪೌರ ಕಾರ್ಮಿಕರ ಊಟದಲ್ಲಿ ಹುಳ ಪತ್ತೆ: ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಿಗೆ ನೋಟಿಸ್
ಬೆಂಗಳೂರು, ಅ.28: ರಾಮಮೂರ್ತಿ ನಗರ ವ್ಯಾಪ್ತಿಯ ಮಸ್ಟರಿಂಗ್ ಕೇಂದ್ರದಲ್ಲಿ ಪೌರ ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್ನಿಂದ ಸರಬರಾಜು ಮಾಡಿದ ಊಟದಲ್ಲಿ ಹುಳ ಪತ್ತೆಯಾಗಿದ್ದು, ಪೌರ ಕಾರ್ಮಿಕರಿಗೆ ಆಹಾರ ಸರಬರಾಜು ಮಾಡುತ್ತಿರುವ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ.
ಪ್ರತಿ ನಿತ್ಯ ಪೌರ ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್ನಿಂದ ಉಚಿತ ಊಟ ವಿತರಿಸಲಾಗುತ್ತಿದ್ದು, ಸೋಮವಾರ ಬೆಳಗ್ಗೆ ಸರಬರಾಜು ಮಾಡಿದ ಪಲಾವ್ನಲ್ಲಿ ಹುಳ ಪತ್ತೆ ಆಗಿದೆ. ತಕ್ಷಣ ವಲಯ ಜಂಟಿ ಆಯುಕ್ತರು ಆಹಾರ ಸರಬರಾಜುದಾರರಿಗೆ ಆಹಾರವನ್ನು ಸರಬರಾಜು ಮಾಡದಂತೆ ಸೂಚಿಸಿ, ಆಹಾರವನ್ನು ಪರೀಕ್ಷೆಗೆ ಒಳಪಡಿಸಲು ಸೂಚಿಸಿದ್ದಾರೆ.
ನಂತರ ಆಹಾರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪೌರ ಕಾರ್ಮಿಕರಿಗೆ ಆಹಾರ ಸರಬರಾಜು ಮಾಡುತ್ತಿರುವ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ. ಮುಂದೆ ಈ ರೀತಿಯ ಘಟನೆಗಳು ಘಟಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದ್ದು, ಪೌರ ಕಾರ್ಮಿಕರು ಯಾವುದೇ ಭಯವಿಲ್ಲದೆ ಆಹಾರ ಸೇವಿಸಬಹುದಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
Next Story