ಕೆಪಿಎಸ್ಸಿ ಮರು ನೇಮಕ ಪ್ರಕ್ರಿಯೆಗೆ ಶೀಘ್ರ ಚಾಲನೆ ಸಾಧ್ಯತೆ
ಬೆಂಗಳೂರು, ಅ.29: ಉದ್ಯೋಗ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಸಿಹಿಸುದ್ದಿ ನೀಡಿದ್ದು, ಕೆಪಿಎಸ್ಸಿ ನೇಮಕ ಪ್ರಕ್ರಿಯೆಗೆ ಮರು ಚಾಲನೆ ನೀಡಲು ಆಯೋಗ ಮುಂದಾಗಿದೆ.
ಹಂಗಾಮಿ ಅಧ್ಯಕ್ಷರಾಗಿದ್ದ ಷಡಕ್ಷರಿ ಸ್ವಾಮಿ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ನೇಮಕವಾಗುತ್ತಿದ್ದಂತೆ ಬಾಕಿ ಉಳಿದುಕೊಂಡಿರುವ ನೇಮಕ ಪ್ರಕ್ರಿಯೆಗಳಿಗೆ ಚಾಲನೆ ನೀಡಲು ಸಿದ್ಧತೆ ಆರಂಭಿಸಿದ್ದಾರೆ.
ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಗೆಜೆಟೆಡ್ ಪ್ರೊಬೆಷನರಿ ಅಧಿಕಾರಿಗಳ ಹುದ್ದೆ, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಶೀಘ್ರ ಲಿಫಿಗಾರರು ಸೇರಿದಂತೆ ವಿವಿಧ ಹುದ್ದೆಗಳ ನೇಮಕ ಪ್ರಕ್ರಿಯೆ ಚಾಲನೆ ಸಿಗಲಿದೆ ಎಂದು ಮೂಲಗಳು ಹೇಳಿವೆ.
ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ 398 ಶೀಘ್ರ ಲಿಫಿಕಾರರು, ಗೆಜೆಟೆಡ್ ಪ್ರೊಬೆಷನರಿ ಅಧಿಕಾರಿಗಳ ಹುದ್ದೆಗಳು(ಗ್ರೂಪ್ ಎ-97, ಗ್ರೂಪ್ ಬಿ-716), 798 ಪ್ರಥಮ ದರ್ಜೆ ಸಹಾಯಕರು, 441 ದ್ವಿತೀಯ ದರ್ಜೆ ಸಹಾಯಕರು, 443 ಬೆರಳಚ್ಚುಗಾರರು ಹುದ್ದೆಗಳು ಸೇರಿದಂತೆ ನೂರಾರು ಹುದ್ದೆಗಳ ನೇಮಕ ಪ್ರಕ್ರಿಯೆ ಸದ್ಯದಲ್ಲಿಯೇ ಚಾಲನೆ ಸಿಗಲಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.