ಬಿಎಸ್ವೈ ಭೇಟಿಯಾಗಿ ಟಿಕೆಟ್ ಬೇಡಿಕೆ ಇಟ್ಟ ಅನರ್ಹ ಶಾಸಕ ಕೆ.ಗೋಪಾಲಯ್ಯ
ಉಪ ಚುನಾವಣೆ
ಬೆಂಗಳೂರು, ನ. 3: ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಟಿಕೆಟ್ ನೀಡಬೇಕು ಎಂದು ಅನರ್ಹ ಶಾಸಕ ಕೆ.ಗೋಪಾಲಯ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾರೆ.
ರವಿವಾರ ಇಲ್ಲಿನ ಡಾಲರ್ಸ್ ಕಾಲನಿಯಲ್ಲಿರುವ ಸಿಎಂ ಬಿಎಸ್ವೈ ನಿವಾಸಕ್ಕೆ ಭೇಟಿ ಮಾಡಿ ಸಮಾಲೋಚನೆ ನಡೆಸಿದ ಗೋಪಾಲಯ್ಯ, ಉಪ ಚುನಾವಣೆಯಲ್ಲಿ ನನಗೆ ಅಥವಾ ನನ್ನ ಪತ್ನಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ್ದಾರೆಂದು ಗೊತ್ತಾಗಿದೆ.
ಸುಪ್ರೀಂ ಕೋರ್ಟ್ನಲ್ಲಿ ಅನರ್ಹ ಶಾಸಕರ ಬಗ್ಗೆ ತೀರ್ಪು ಏನೇ ಬಂದರೂ ನಮ್ಮನ್ನು ಕೈಬಿಡಬಾರದು. ಅಲ್ಲದೆ, ಕ್ಷೇತ್ರದ ಬಿಜೆಪಿ ಮುಖಂಡರು ತನ್ನ ವಿರುದ್ದ ಸಂಚು ರೂಪಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಜನರಿಗೆ ತಪ್ಪು ಸಂದೇಶ ರವಾನೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾರೆಂದು ದೂರಿದ್ದಾರೆಂದು ಹೇಳಲಾಗಿದೆ.
ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಒಡಕಿಗೆ ಅವಕಾಶವಿಲ್ಲದಂತೆ ಸ್ಥಳೀಯ ಮುಖಂಡರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಕ್ಷೇತ್ರದ ಮತದಾರರಿಗೆ ನನ್ನ ಬಗ್ಗೆ ತಪ್ಪುಸಂದೇಶ ರವಾನೆಯಾಗುವುದನ್ನು ನಿಯಂತ್ರಿಸಬೇಕು. ಉಪಚುನಾವಣೆಯಲ್ಲಿ ಟಿಕೆಟ್ ಗೊಂದಲವನ್ನು ಪರಿಹರಿಸಬೇಕೆಂದು ಗೋಪಾಲಯ್ಯ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.