ಬೆಂಗಳೂರು: ಕುಸಿಯುವ ಹಂತದಲ್ಲಿ 178 ಕಟ್ಟಡಗಳು; 77 ಕಟ್ಟಡಗಳ ತೆರವಿಗೆ ನೋಟಿಸ್ ಜಾರಿ
ಆಯುಕ್ತ ಅನಿಲ್ ಕುಮಾರ್ ಮಾಹಿತಿ
ಬೆಂಗಳೂರು, ನ. 11: ನಗರದಲ್ಲಿ 178 ಕಟ್ಟಡಗಳು ಕುಸಿಯುವ ಹಂತದಲ್ಲಿದ್ದು ಅದರಲ್ಲಿ 77 ಕಟ್ಟಡಗಳ ತೆರವಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಿಳಿಸಿದರು.
ನಗರದಲ್ಲಿ ಪತ್ತೆಯಾಗಿರುವ 178 ಕಟ್ಟಡಗಳ ಪೈಕಿ 77 ಕಟ್ಟಡಗಳ ಮಾಲಕರಿಗೆ ನೋಟಿಸ್ ನೀಡಿ, ಕಟ್ಟಡ ತೆರವುಗೊಳಿಸುವಂತೆ ಸೂಚಿಸಲಾಗಿದೆ. ಉಳಿದ ಕಟ್ಟಡಗಳಿಗೆ ಶೀಘ್ರವೇ ನೋಟಿಸ್ ನೀಡಲು ಬಿಬಿಎಂಪಿ ಉದ್ದೇಶಿಸಿದೆ ಎಂದು ತಿಳಿಸಿದರು.
ನಗರದಲ್ಲಿ ಶನಿವಾರ ಸುರಿದ ಭಾರಿ ಮಳೆಗೆ ಸುಬ್ರಹ್ಮಣ್ಯ ನಗರದಲ್ಲಿ ಎರಡು ಮಹಡಿಯ ಕಟ್ಟಡ ಕುಸಿತಗೊಂಡಿದೆ. ಪಶ್ಚಿಮ ವಲಯದ ಸುಬ್ರಹ್ಮಣ್ಯ ನಗರದ ವಾರ್ಡ್ನ 13ನೇ ಮುಖ್ಯರಸ್ತೆಯ ಕೃಷ್ಣಮೂರ್ತಿ ಎಂಬುವವರಿಗೆ ಸೇರಿದ ಸುಮಾರು 50 ವರ್ಷದ ಹಳೆಯ ಕಟ್ಟಡ ಶನಿವಾರ ಸುರಿದ ಮಳೆಗೆ ಕುಸಿದಿದೆ. ಕಳೆದ ಜುಲೈನಲ್ಲಿ ನಗರದ ಕಾಕ್ಸ್ಟೌನ್ನಲ್ಲಿ ಕಟ್ಟಡ ಕುಸಿದು ನಾಲ್ಕು ಮಂದಿ ಮೃತಪಟ್ಟಿದ್ದರು. ಸೆಪ್ಟೆಂಬರ್ನಲ್ಲಿ ಬನಶಂಕರಿಯ 7ನೇ ಹಂತದ ಪುಟ್ಟೇನಹಳ್ಳಿಯ ವಿವೇಕಾನಂದ ಕಾಲನಿಯಲ್ಲಿ ಮೂರು ಅಂತಸ್ತಿನ ಮಹಡಿ ಕುಸಿದಿತ್ತು. ಹೀಗಾಗಿ ಬಿಬಿಎಂಪಿ ಆಯುಕ್ತರು ಸೆಪ್ಟೆಂಬರ್ನಲ್ಲಿ ವಲಯವಾರು ಪ್ರತ್ಯೇಕ ಅಧಿಕಾರಿಗಳ ತಂಡ ರಚಿಸಿ ಶಿಥಿಲಗೊಂಡಿರುವ ಕಟ್ಟಡಗಳನ್ನು ಗುರುತಿಸುವಂತೆ ಸೂಚನೆ ನೀಡಿದ್ದಾರೆ.
ನಗರದ ಕೇಂದ್ರ ಭಾಗದ ದಕ್ಷಿಣ ವಲಯದಲ್ಲಿ 33, ಪಶ್ಚಿಮ ವಲಯದಲ್ಲಿ 33, ಪೂರ್ವದಲ್ಲಿ 49, ಯಲಹಂಕದಲ್ಲಿ 61 ಹಾಗೂ ಮಹದೇವಪುರ ವಲಯದಲ್ಲಿ 2 ಶಿಥಿಲಗೊಂಡಿರುವ ಕಟ್ಟಡಗಳಿವೆ ಎಂದು ಗುರುತಿಸಲಾಗಿದೆ. ಆದರೆ, ದಾಸರಹಳ್ಳಿ, ಬೊಮ್ಮನಹಳ್ಳಿ ಹಾಗೂ ರಾಜರಾಜೇಶ್ವರಿನಗರ ವಲಯದಲ್ಲಿ ಒಂದೇ ಒಂದು ಶಿಥಿಲಗೊಂಡಿರುವ ಕಟ್ಟಡಗಳಿಲ್ಲ ಎಂದು ಪಾಲಿಕೆ ಅಧಿಕಾರಿಗಳು ನೀಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನಗರದಲ್ಲಿರುವ ಶಿಥಿಲಾವಸ್ಥೆಯಲ್ಲಿರುವ 77 ಕಟ್ಟಡಗಳನ್ನು ತೆರವುಗೊಳಿಸುವಂತೆ ನೋಟಿಸ್ ನೀಡಲಾಗಿದೆ. ಅದರಲ್ಲಿ ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಯಲಹಂಕ ವಲಯದಲ್ಲಿ ಒಟ್ಟು 77 ಶಿಥಿಲಗೊಂಡಿರುವ ಕಟ್ಟಡಗಳಿಗೆ ಕೆಎಂಸಿ ಕಾಯ್ದೆಯ ಅನುಗುಣವಾಗಿ ನೋಟಿಸ್ ನೀಡಲಾಗಿದೆ. ಅಲ್ಲದೆ ಅತಿ ಶೀಘ್ರದಲ್ಲಿ ಕಟ್ಟಡಗಳ ತೆರವು ಮಾಡುವಂತೆ ಕಟ್ಟಡ ಮಾಲಕರಿಗೆ ಸೂಚನೆ ನೀಡಲಾಗಿದೆ.