ಮಹನೀಯರನ್ನು ಜಾತಿಗೆ ಸೀಮಿತಗೊಳಿಸಬಾರದು: ಸಿಎಂ ಯಡಿಯೂರಪ್ಪ
ಕನಕ ಜಯಂತಿ ಮತ್ತು ‘ಕನಕ ಶ್ರೀ’ ಪ್ರಶಸ್ತಿ ಪ್ರದಾನ
ಬೆಂಗಳೂರು, ನ.15: ಸಮಾಜದಲ್ಲಿನ ಅನೇಕ ಮಹನೀಯರು ಸರ್ವ ಜನಾಂಗಕ್ಕೆ ಪ್ರೇರಕ ಶಕ್ತಿಗಳಾಗಬೇಕೆ ಹೊರತು ಜಾತಿಗೆ ಸೀಮಿತ ಮಾಡಬಾರದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಸಂತ ಶ್ರೇಷ್ಠ ಕನಕದಾಸರ ಜಯಂತಿ ಮತ್ತು ‘ಕನಕ ಶ್ರೀ’ ಪ್ರಶಸ್ತಿ ಪ್ರದಾನ ಹಾಗೂ ಕನಕದಾಸರನ್ನು ಕುರಿತ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕನಕದಾಸ, ಬಸವಣ್ಣ, ಅಂಬೇಡ್ಕರ್ ಸೇರಿದಂತೆ ಹಲವು ಮಹನೀಯರ ಜಯಂತಿಗಳನ್ನು ಸರಕಾರದಿಂದ ಆಚರಣೆ ಮಾಡಲಾಗುತ್ತದೆ. ಆದರೆ, ಇಂದಿನ ದಿನಗಳಲ್ಲಿ ಮಹನೀಯರನ್ನು ಜಾತಿಗೆ ಸೀಮಿತಗೊಳಿಸುವ ಪ್ರವೃತ್ತಿ ಬೆಳೆಯುತ್ತಿದೆ ಎಂದ ಅವರು, ಯಾರ ಜಯಂತಿಯನ್ನೂ ಜಾತಿಗೆ ಸೀಮಿತ ಮಾಡಬಾರದು ಎಂದರು.
ಕೋಮುವಾದ, ಜಾತೀಯತೆ, ಅನ್ಯಾಯಗಳು ಅಧಿಕವಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಕನಕದಾಸರ ಜೀವನ ಎಲ್ಲರಿಗೂ ಮಾದರಿಯಾಗಿದೆ. ಅವರು ಜಾತೀಯತೆ, ಅಸ್ಪೃಶ್ಯತೆ ವಿರುದ್ಧ ಧ್ವನಿ ಎತ್ತಿದ್ದರು. ಇಂದಿನ ಯುವಕರು ಕನಕದಾಸರ ಸಂದೇಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಿಎಂ ಯಡಿಯೂರಪ್ಪ ಕರೆ ನೀಡಿದರು.
ಕನಕದಾಸ ನಾಡು ಕಂಡ ಶ್ರೇಷ್ಠ ಸಂತರಲ್ಲಿ ಪ್ರಮುಖರು. ಉನ್ನತ ವೌಲ್ಯಗಳನ್ನು ಸಾರಿದ ಮಹಾನ್ ಚಿಂತಕ, ದಾರ್ಶನಿಕ ಕವಿ, ಸಂತ ಪರಂಪರೆಯನ್ನು ಬೆಳಗಿದ ದಾಸರಾಗಿದ್ದಾರೆ. ಸಮಾಜಮುಖಿ ಚಿಂತನೆಯನ್ನು ಹತ್ತಿಸಿದ ದೇಸಿ ಪ್ರತಿಭೆ ಕನಕದಾಸರಾಗಿದ್ದಾರೆ ಎಂದು ಅವರು ಬಣ್ಣಿಸಿದರು.
ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಚಿವ ಸಿ.ಟಿ.ರವಿ ಮಾತನಾಡಿ, ನಮ್ಮಲ್ಲಿ ಕನಕದಾಸ, ಬಸವಣ್ಣ ಸೇರಿದಂತೆ ಅನೇಕ ಮಹನೀಯರಿಂದ ಭಕ್ತಿ ಚಳವಳಿ ಹುಟ್ಟಿಕೊಂಡಿದೆ. ಒಂದು ವೇಳೆ ಇದು ಇಲ್ಲದೇ ಇದ್ದಿದ್ದರೆ ನಮ್ಮ ದೇಶದ ಮೇಲೆ ನಡೆದ ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಆಕ್ರಮಣದಿಂದ ಸಂಪೂರ್ಣವಾಗಿ ಎಲ್ಲವೂ ಪಲ್ಲಟವಾಗುತ್ತಿದ್ದವು ಎಂದರು.
ಸಮಾಜದ ಮಹನೀಯರು ತಾವು ಹುಟ್ಟಿದ ಜಾತಿಯಿಂದ ಶ್ರೇಷ್ಠರಾಗಲಿಲ್ಲ. ಅವರ ಸಮಾಜಮುಖಿ ಬದುಕಿನಿಂದ ಶ್ರೇಷ್ಠರಾಗಿದ್ದಾರೆ. ಮಹನೀಯರು ಎಲ್ಲರನ್ನೂ ಅಪ್ಪಿಕೊಳ್ಳುವ, ಸಮಾನತೆ ಸಾರುವುದನ್ನು ಕಲಿಸಿದ್ದಾರೆ. ಆದರೆ, ಸ್ವತಂತ್ರ ಭಾರತದ ಬಳಿಕ ನಮ್ಮಲ್ಲಿ ಜಾತೀಯತೆ ಅಧಿಕವಾಗುತ್ತಿದೆ. ವಿದ್ಯಾವಂತರಲ್ಲಿಯೇ ಜಾತೀಯತೆ ತುಂಬಿ ತುಳುಕುತ್ತಿದೆ ಎಂದು ನುಡಿದರು.
ಜಾತಿಯ ಮೂಲಕ ಮಹನೀಯರನ್ನು ಗುರುತಿಸಿ, ಜಯಂತಿಗಳನ್ನು ಆಚರಣೆ ಮಾಡುವಂತಾಗಿದೆ ಎಂದ ಸಚಿವ ಸಿ.ಟಿ.ರವಿ, ಜಯಂತಿ ಆಚರಣೆಗಳ ಸಂಬಂಧ ಎಲ್ಲ ಜಿಲ್ಲೆಗಳಿಂದ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. ಅದರ ನಂತರ ಜಯಂತಿ ಆಚರಣೆ ಹೇಗಿರಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಡಾ.ನಟರಾಜ ಬೂದಾಳು ಹಾಗೂ ಬಿ.ಎನ್.ಮೂರ್ತಿಗೆ 2018 ಮತ್ತು 2019 ನೆ ಸಾಲಿನ ಕನಕಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೂ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಿಂದ ಪ್ರಕಟಿಸಿರುವ 8 ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ತಿಂತಿಣಿ ಬ್ರಿಡ್ಜ್ ಶಾಖಾ ಮಠದ ಸಿದ್ಧರಾಮಾನಂದಪುರ ಸ್ವಾಮೀಜಿ, ಶಾಸಕ ಉದಯ ಬಿ.ಗರುಡಾಚಾರ್, ಚಿಂತಕ ಡಿ.ವಿ.ವಸಂತಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.