ಸಂವಿಧಾನ ಪ್ರಜಾಪ್ರಭುತ್ವದ ಮೌಲ್ಯ-ಸಿದ್ಧಾಂತಗಳ ಸರ್ವಶ್ರೇಷ್ಠ ದಾಖಲೆ: ಕುಮಾರಸ್ವಾಮಿ
ಬೆಂಗಳೂರು, ನ.26: ಇಂದು ಸಂವಿಧಾನದ ದಿನ. ಭಾರತದ ಸಂವಿಧಾನವು ಪ್ರಜಾಪ್ರಭುತ್ವದ ಮೌಲ್ಯ, ಸಿದ್ಧಾಂತಗಳ ಸರ್ವಶ್ರೇಷ್ಠ ದಾಖಲೆ. ವಿವಿಧ ಧರ್ಮ, ಭಾಷೆ, ಸಂಸ್ಕೃತಿಯಿಂದ ಕೂಡಿದ ಈ ದೇಶದಲ್ಲಿ ಸಂವಿಧಾನ 70 ವರ್ಷಗಳಿಂದ ಬಳಕೆಯಾಗುತ್ತಿರುವುದು ನಮ್ಮ ಹೆಗ್ಗಳಿಕೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಸಂವಿಧಾನದ ಅಶೋತ್ತರಗಳಿಗೆ ಪೆಟ್ಟು ನೀಡಿದ ಘಟನೆಗಳೂ ಈ ದೇಶದಲ್ಲಿ ನಡೆಯದೇ ಏನಿಲ್ಲ. ಅಂಥವನ್ನು ತಡೆಯುತ್ತ, ಸಂವಿಧಾನದ ಮೂಲ ಉದ್ದೇಶಗಳನ್ನು ಪಾಲಿಸುವುದು ನಮ್ಮ ಹೊಣೆಗಾರಿಕೆ. ಅದೇ, ಸಂವಿಧಾನ ರಚಿಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ನಾವು ನೀಡುವ ದೊಡ್ಡ ಗೌರವ ಎಂದು ಅವರು ಹೇಳಿದ್ದಾರೆ.
ಬ್ರಿಟಿಷರ ದಾಸ್ಯದಿಂದ ಹೋರಾಡಿ ಹೊರಬಂದ ದೇಶಕ್ಕೆ ಸಂವಿಧಾನದ ಮೂಲಕ ಭವಿಷ್ಯದ ದಾರಿ ತೋರಿದ್ದು ಅಂಬೇಡ್ಕರ್. ಇಂದು ದೇಶವೇನಾದರೂ ಪ್ರಗತಿಯೊಂದಿಗೆ ಹೆಜ್ಜೆ ಹಾಕುತ್ತಿದ್ದರೆ, ನಾಗರಿಕರು ಹಕ್ಕಿನಿಂದ ಬದುಕುತ್ತಿದ್ದರೆ ಅದಕ್ಕೆ ಕಾರಣ ಸಂವಿಧಾನ ಮತ್ತು ಅದರ ಕರ್ತೃ ಅಂಬೇಡ್ಕರ್ ಎಂದು ಕುಮಾರಸ್ವಾಮಿ ಬಣ್ಣಿಸಿದ್ದಾರೆ.
Next Story