ಬಿಡಿಎ ಕಾರ್ಯಾಚರಣೆ: 300 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ
ಬೆಂಗಳೂರು, ಡಿ.17: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರೆಸಿದ್ದು, ಮಂಗಳವಾರ ಬಿಡಿಎ ಆಯುಕ್ತ ಡಾ.ಜಿ.ಸಿ.ಪ್ರಕಾಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಲ್ಲಿನ ನಾಗವಾರ ಗ್ರಾಮ ವ್ಯಾಪ್ತಿಯಲ್ಲಿ 300 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಶಕ್ಕೆ ಪಡೆಯಲಾಗಿದೆ.
ನಾಗವಾರ ಗ್ರಾಮದ ಸರ್ವೆ ಸಂಖ್ಯೆ 75ರಲ್ಲಿ ಎಚ್ಬಿಆರ್ 2ನೇ ಹಂತ ಬಡಾವಣೆ ನಿರ್ಮಾಣಕ್ಕಾಗಿ ಪ್ರಾಧಿಕಾರವು ಅಧಿಸೂಚನೆಯನ್ನು 1985ರಲ್ಲಿ ಹೊರಡಿಸಿದ್ದು, 1988ರಲ್ಲಿ ಐತೀರ್ಪು ರಚಿಸಿ, ಪ್ರಾಧಿಕಾರವು ಸ್ವಾಧೀನಪಡಿಸಿಕೊಂಡಿರುತ್ತದೆ. ಸುಮಾರು 6 ಎಕರೆ 3ಗುಂಟೆ ಪ್ರದೇಶದಲ್ಲಿ 1.26 ಎಕರೆ ವರ್ತುಲ ರಸ್ತೆಗೆ ಉಳಿಕೆ, 4.17 ಎಕರೆ ಪ್ರದೇಶವು ಬಡಾವಣೆ ನಿರ್ಮಾಣಕ್ಕಾಗಿ ಬಿಡಿಎ ವಶದಲ್ಲಿದೆ.
ಪ್ರಸ್ತುತ ಈ ಪ್ರದೇಶವನ್ನು ಸ್ಥಳೀಯರು ಒತ್ತುವರಿ ಮಾಡಿಕೊಂಡಿದ್ದು, ಅಲ್ಲಿ ಅನಧಿಕೃತವಾಗಿ ತಲೆ ಎತ್ತಿದ್ದ ಕಟ್ಟಡ ಮತ್ತು ಶೆಡ್ಗಳನ್ನು ಒಟ್ಟು ಮೌಲ್ಯ ಸುಮಾರು 300 ಕೋಟಿ ರೂ.ಆಸ್ತಿಯನ್ನು ಬಿಡಿಎ ವಶಕ್ಕೆ ಪಡೆದುಕೊಂಡಿದೆ. ಕಾರ್ಯಾಚರಣೆಯಲ್ಲಿ ಬಿಡಿಎ ಕಾರ್ಯನಿರತ ಪಡೆಯ ಆರಕ್ಷಕ ಅಧೀಕ್ಷಕ ಡಾ.ಶಿವಕುಮಾರ್, ಅಭಿಯಂತರ ಸದಸ್ಯ ಶಿವಶಂಕರ್ ಸೇರಿದಂತೆ ಪ್ರಮುಖರಿದ್ದರು.