ಸಿಎಎ ಪರ ಸಹಿ ಹಾಕುವಂತೆ ಕಿರುಕುಳ ಆರೋಪ: ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದ ಮುಖ್ಯಮಂತ್ರಿ
ಬೆಂಗಳೂರು, ಜ.9: ನಗರದ ಜ್ಯೋತಿನಿವಾಸ್ ಕಾಲೇಜಿನಲ್ಲಿ ಸಿಎಎ ಬೆಂಬಲಿಸಿ ಸಹಿ ಸಂಗ್ರಹ ವೇಳೆ ವಿದ್ಯಾರ್ಥಿನಿಯರಿಗೆ ಅನಗತ್ಯವಾಗಿ ಕಿರುಕುಳ ನೀಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರೇ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಗುರುವಾರ ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲೇಜಿನ ವಿದ್ಯಾರ್ಥಿಗಳಿಗೆ ಸಿಎಎ ಹೆಸರಿನಲ್ಲಿ ಕೆಲವರು ಕಿರುಕುಳ ನೀಡಿದ್ದಾರೆಂಬ ಆರೋಪದ ಪ್ರಕರಣದಲ್ಲಿ ಯಾರೇ ದೂರು ನೀಡಿದರೂ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಸಿಎಎ ಹೆಸರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿರುವವರ ವಿರುದ್ಧ ತನಿಖೆ ನಡೆಸಲಾಗುವುದು. ಈ ಬಗ್ಗೆ ಕಾಂಗ್ರೆಸ್ ನಾಯಕರು ರಾಜಕೀಯ ಮಾಡಲು ಹೋಗಬಾರದು. ಪ್ರಕರಣ ಸಂಬಂಧ ಯಾರೇ ದೂರು ಕೊಟ್ಟರು ಅದನ್ನು ಸ್ವೀಕರಿಸಿ ತನಿಖೆ ನಡೆಸಲಾಗುವುದು ಎಂದರು.
ಜ್ಯೋತಿನಿವಾಸ ಕಾಲೇಜು ವಿದ್ಯಾರ್ಥಿನಿಯರಿಗೆ ಸಿಎಎ ಪರವಾಗಿ ಸಹಿ ಹಾಕುವಂತೆ ಕೆಲವರು ಒತ್ತಾಯ ಮಾಡಿರುವ ವಿಷಯವನ್ನು ಹಿರಿಯ ಶಾಸಕ ರಾಮಲಿಂಗಾರೆಡ್ಡಿ ರಾಜಕೀಯ ಮಾಡಲು ಹೊರಟಿದ್ದಾರೆ. ಇದು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನವಾಗಿದೆ.
-ಬಸವರಾಜ ಬೊಮ್ಮಾಯಿ, ಗೃಹ ಸಚಿವ