ಭಾರತವನ್ನೇ ಬಂಧಿಖಾನೆಯಾಗಿಸುವ ಹುನ್ನಾರ: ಡಾ.ನಟರಾಜ್ ಹುಳಿಯಾರ್
ಬೆಂಗಳೂರು, ಜ.17: ಆಳುವವರು ಭಾರತವನ್ನೇ ಬಂಧಿಖಾನೆಯನ್ನಾಗಿ ಮಾಡಲು ಹೊರಟಿದ್ದಾರೆ. ಇದು ಅವರಿಗೆ ಹೊಸ ಪ್ರಕ್ರಿಯೆ ಏನೂ ಅಲ್ಲ ಎಂದು ಲೇಖಕ ಡಾ.ನಟರಾಜ್ಹುಳಿಯಾರ್ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ನಗರದ ನಯನ ಸಭಾಂಗಣದಲ್ಲಿ ಆಕೃತಿ ಪುಸ್ತಕ ಹಾಗೂ ಸಂಸ ಥಿಯೇಟರ್ ವತಿಯಿಂದ ಆಯೋಜಿಸಿದ್ದ ಸಮಕಾಲೀನ ಸಾಹಿತಿ-ಸಾಹಿತ್ಯ ಸ್ಪಂದನ ಹಾಗೂ ಬ್ರಾಹ್ಮಿನ್ ಕೆಫೆ, ಎಲ್ಲ ಮೀನುಗಳು ಗಾಳಕ್ಕೆ ಸಿಕ್ಕುವುದಿಲ್ಲ, ರೂಪ ರೂಪಗಳ ದಾಟಿ ಮತ್ತು ಬೆಳಕಿನ ಅಂಗಡಿ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಾತಿಪದ್ಧತಿಯ ಮೂಲಕ ನೂರಾರು ವರ್ಷಗಳ ಕಾಲ ದಲಿತ, ಅಸ್ಪಶ್ಯರನ್ನು ಜಾತೀಯತೆಯ ಬಂದಿಖಾನೆಯಲ್ಲಿ ಇಟ್ಟಿದ್ದರು. ಶೋಷಿತ ಜಾತಿಗಳನ್ನು ಒಂದು ಕಡೆಯಿಟ್ಟು ವಿಕೃತ ಆನಂದ ಪಡುವುದು ಅಂದಿನಿಂದಲೂ ಇವರಿಗೆ ಅಭ್ಯಾಸವಾಗಿಬಿಟ್ಟಿದೆ. ಇದೀಗ ಹೊಸ ರೀತಿಯಲ್ಲಿ ಜನರನ್ನು ಶೋಷಿಸಲು ಮುಂದಾಗಿದ್ದು, ಜರ್ಮನಿ ಮತ್ತು ಇಸ್ರೇಲ್ಗಳು ಇದನ್ನು ಕಲಿಸುತ್ತಿವೆ ಎಂದು ಅವರು ಹೇಳಿದರು.
ದೇಶದಲ್ಲಿ ನಾವಿಂದು ಭಾಷೆಯನ್ನೇ ನಿರ್ನಾಮ ಮಾಡಿ, ಸುಳ್ಳಿನ ಕಾರ್ಖಾನೆ ಕಟ್ಟುವವರ ಎದುರು ನಿಂತಿದ್ದೇವೆ. ಅಮೆರಿಕಾ ಏನು ಹೇಳುತ್ತದೆಯೋ ಅದನ್ನೇ ನಮ್ಮ ಇಂದಿನ ಜನಪ್ರತಿನಿಧಿಗಳು ಮಾಡಲು ಹೊರಟಿದ್ದಾರೆ. ಅಮೆರಿಕಾ ಅಧ್ಯಕ್ಷ ಟ್ರಂಪ್ ಎಂಬ ಅಜ್ಞಾನಿ ಹೇಳುವ ಮಾತನ್ನು ನಮ್ಮ ದೇಶದ ಗೌರವಯುತವಾದ ಹುದ್ದೆಯಲ್ಲಿರುವ ವ್ಯಕ್ತಿ ಪಾಲಿಸಲು ಮುಂದಾಗಿರುವುದು ದುರಂತ ಎಂದರು.
ನಮ್ಮ ಸಮಾಜದಲ್ಲಿಂದು ಪ್ರಭುತ್ವ ಅಥವಾ ವ್ಯವಸ್ಥೆ ಏನು ಹೇಳುತ್ತದೆಯೋ ಅದನ್ನೇ ಸತ್ಯ ಎಂದು ನಂಬುವ ಸ್ಥಿತಿಯಲ್ಲಿದ್ದೇವೆ. ವ್ಯವಸ್ಥೆ ಭಯೋತ್ಪಾದನೆ ಎಂದು ಯಾವುದನ್ನು ಹೇಳುತ್ತದೆಯೋ ಅದನ್ನೇ ಸಮಾಜವೂ ಹೇಳುತ್ತದೆ. ಹಾಗೆಯೇ, ದೇಶಪ್ರೇಮ ಎಂದು ವ್ಯವಸ್ಥೆ ಹೇಗೆ ಹೇಳುತ್ತದೆಯೋ ಅದನ್ನೇ ಸಮಾಜವೂ ಹೇಳುತ್ತಿದೆ. ಇದನ್ನು ಇಂದಿನ ಕೋಮುವಾದಿಗಳು ಬಳಸಿಕೊಂಡು ಮತ್ತಷ್ಟು ಸಮಾಜವನ್ನು ಹಾಳು ಮಾಡಲು ಮುಂದಾಗಿದ್ದಾರೆ ಎಂದು ನುಡಿದರು.
ಭಯೋತ್ಪಾದನೆ, ಸೈನ್ಯದ ಕುರಿತು, ಅದರ ಹಿಂದಿರುವ ವಾಸ್ತವದ ಕುರಿತು ಎಲ್ಲರೂ ಅರಿಯಬೇಕಿದೆ. ಸಂಕುಚಿತ ಮುಖಗಳು ಯಾವುವು ಎಂಬುದನ್ನು ಕಥೆಗಾರರು ಅಷ್ಟೇ ಸತ್ಯವನ್ನು ಹೇಳಲು ಸಾಧ್ಯ. ಪತ್ರಿಕೋದ್ಯಮದಿಂದ ಇಂತಹ ಕೆಲಸ ಮಾಡಲು ಅಸಾಧ್ಯ ಎಂದು ಅವರು ಪ್ರತಿಪಾದಿಸಿದರು.
ಬಾಬರಿ ಮಸೀದಿ ಧ್ವಂಸಗೊಳಿಸಿದ ಬಳಿಕ ಹಿಂದೂ-ಮುಸ್ಲಿಮ್ರ ಐಕ್ಯತೆಯನ್ನು ಕಟ್ಟಲು ಎಲ್ಲರೂ ಬಹಳಷ್ಟು ಶ್ರಮ ಪಟ್ಟಿದ್ದಾರೆ. 20 ವರ್ಷಗಳ ಕಾಲ ಪಟ್ಟ ಶ್ರಮವೆಲ್ಲವೂ ಇಂದು ಒಂದಷ್ಟು ಮಟ್ಟಿಗೆ ಯಶಸ್ಸು ಕಂಡಿದೆ. ಆದರೆ, ಇದೀಗ ಇದನ್ನು ಹೊಡೆಯಲು ಮುಂದಾಗಿದ್ದಾರೆ. ಇದರ ಪರಿಣಾಮ ನೇರವಾಗಿ ಮಹಿಳೆಯರ ಮೇಲೆ ಬೀರಲಿದೆ. ಹೀಗಾಗಿ, ಎಲ್ಲರೂ ಆರೋಗ್ಯಕರವಾಗಿ ಬೆಸೆಯಲು ಚಿಂತನೆ ನಡೆಸಬೇಕು ಎಂದರು.
ಸಹ ಪ್ರಾಧ್ಯಾಪಕ ಪ್ರಕಾಶ ಮಂಟೇದ ಮಾತನಾಡಿ, ಜಾಗತೀಕರಣದ ನಡುವೆ ಯಾವುದನ್ನು ಕಳೆದುಕೊಳ್ಳುತ್ತವೆ ಎಂಬುದರ ಬಗ್ಗೆ ಚಿಂತಿಸಬೇಕಿದೆ. ಓದುಗರಿಗೆ ನವಿರಾಗಿ, ಚಿಂತನೆ ತನ್ಮಯತೆಯನ್ನು ಕೃತಿ ಉಂಟು ಮಾಡುತ್ತದೆ. ಸಂಭಂದಗಳ ನೈತಿಕತೆ, ಹಳೆಯ ನೆನಪಿನ ಜ್ಞಾಪಿಸುತ್ತದೆ. ಸಂಬಂದಗಳಿಗೆ ಕಟ್ಟು ಪಾಡುಗಳಿಗೆ ಇರಬಾರದು ಎಂದರು.
ಬದುಕಿಗೆ ಬಣ್ಣಗಳನ್ನು ಕೃತಿ ಕಟ್ಟಿಕೊಡುತ್ತದೆ. ಎಲ್ಲ ಮೀನುಗಳು ಗಾಳಕ್ಕೆ ಸಿಗುವುದಿಲ್ಲ ಕೃತಿಯ ಮೂಲಕ ಲೇಖಕ ಸಮಾಜದ ತಲ್ಲಣಗಳನ್ನು ಬದುಕಿಗೆ ತಾಗಿಸುವ ನಿಟ್ಟಿನಲ್ಲಿ ಕಟ್ಟಿಕೊಟ್ಟಿದ್ದಾರೆ. ಮನುಷ್ಯ ಪ್ರಜ್ಞೆ ಯನ್ನು ಯಾವ ನೆಲೆಯಲ್ಲಿ ಕಾಣಬೇಕು. ಗತಕಾಲದ ನೆನೆಪು, ಸಂಬಂದಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬ ಅನುಭವಗಳನ್ನು ಕಟ್ಟಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬರಹಗಾರ ಡಾ.ಸಿ.ಎಸ್.ದ್ವಾರಕಾನಾಥ್, ಪತ್ರಕರ್ತೆ ಪದ್ಮಾ ಶಿವಮೊಗ್ಗ, ಲೇಖಕರಾದ ವಿ.ಆರ್.ಕಾರ್ಪೆಂಟರ್, ಚಲಂ ಹಾಡ್ಲಹಳ್ಳಿ, ಬೇಲೂರು ರಘುನಂದನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಓದದೇ ಪುಸ್ತಕದ ಬಗ್ಗೆ ಮಾತನಾಡಬಾರದು. ಹೀಗಾಗಿ, ನಾನು ಚಂದ್ರಶೇಖರ ಕಂಬಾರ ಹಾಗೂ ಯು.ಆರ್.ಅನಂತಮೂರ್ತಿಯವರ ಸ್ಥಿತಿಗೆ ಮಾತನಾಡುವುದಿಲ್ಲ. ಕಥೆ, ಕವನ, ನಾಟಕಗಳಿಂದ ಸತ್ಯ ಮತ್ತು ಸುಳ್ಳಿನ ಮುಖಾಮುಖಿಯಾಗಲು ಸಾಧ್ಯ.
-ನಟರಾಜ್ ಹುಳಿಯಾರ್, ಅಂಕಣಕಾರ